ನವದೆಹಲಿ: ಭಾರತೀಯ ಬಾಕ್ಸರ್ ಸರಿತಾ ದೇವಿಗೆ ಬೆಂಬಲ ಸೂಚಿಸಿರುವ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಆಕೆಯನ್ನು ಬೆಂಬಲಿಸುವಂತೆ ದೇಶದ ಜನತೆಗೆ ಕರೆ ನೀಡಿದ್ದಾರೆ.
ಬುಧವಾರ ಕ್ರೀಡಾ ಸಚಿವ ಸರ್ಬನಾನಂದ ಸೋನೋವಾಲ್ರನ್ನು ಭೇಟಿ ಮಾಡಿದ ಸಚಿನ್ ದೇಶದ ನಾಗರೀಕರು ಸರಿತಾ ದೇವಿಗೆ ಬೆಂಬಲ ನೀಡಿ ಎಂದಿದ್ದಾರೆ.
ಸರಿತಾ ದೇವಿಗೆ ದೇಶದ ಜನರ ಬೆಂಬಲ ಬೇಕಾಗಿದೆ. ಎಲ್ಲರೂ ಆಕೆಗೆ ಬೆಂಬಲ ಸೂಚಿಸಿ ನ್ಯಾಯ ಸಿಗುವಂತೆ ಮಾಡೋಣ.
ನಾನೊಬ್ಬ ಕ್ರೀಡಾಪಟುವಾಗಿರುವುದರಿಂದ ಸರಿತಾ ದೇವಿಯ ಸಂಕಟವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಈ ಪರಿಸ್ಥಿತಿಯನ್ನು ನಿಭಾಯಿಸುವುದು ಆಕೆಗೆ ತುಂಬಾ ಕಷ್ಟವಿದೆ ಎಂದು ಸಚಿನ್ ಹೇಳಿದ್ದಾರೆ.
ನಾವೆಲ್ಲರೂ ಸರಿತಾ ದೇವಿಯ ಜತೆಗಿದ್ದೀವಿ. ಎಲ್ಲರೂ ಆಕೆಯ ಮೇಲೆ ಕಾಳಜಿ ತೋರಿಸುತ್ತಿದ್ದಾರೆ ಎಂದು ಸೋನೋವಾಲ್ ಹೇಳಿದ್ದಾರೆ.
ಸದ್ಯ ಈಗ ನಿಷೇಧಕ್ಕೊಳಗಾಗಿರುವ ಸರಿತಾ ದೇವಿಗೆ ಈ ಹಿಂದೆಯೂ ಬೆಂಬಲ ಸೂಚಿಸಿದ ಸಚಿನ್ , ಆಕೆಗೆ ನ್ಯಾಯ ಸಿಗಬೇಕೆಂದು ಒತ್ತಾಯಿಸಿ ಕ್ರೀಡಾ ಸಚಿವಾಲಯಕ್ಕೆ ಪತ್ರ ಬರೆದಿದ್ದರು.