ಮುಂಬೈ

ಕುಂಭ ಮೇಳ: ಸಾಧು ವೇಷ ಧರಿಸಿದ್ದ ವಜ್ರದ ಕಳ್ಳನ ಬಂಧನ

Pinterest LinkedIn Tumblr


ಮುಂಬಯಿ: ಸುಮಾರು 25 ವಜ್ರದ ವ್ಯಾಪಾರಿಗಳಿಗೆ ಪಂಗನಾಮ ಹಾಕಿ ಬರೋಬ್ಬರಿ 27 ಕೋಟಿ ರೂಪಾಯಿ ಲಪಟಾಯಿಸಿದ್ದ ಕಿಲಾಡಿ ಕಳ್ಳನೊಬ್ಬ ಗುರುವಾರ ಕಲ್ಯಾಣದಲ್ಲಿ ಅರೆಸ್ಟ್ ಆಗಿದ್ದಾನೆ.

ಆರೋಪಿ ಯತೀಶ್ ಫಿಚಾಡಿಯಾ (31) ತನ್ನ ಸಹಯೋಗಿ ರಾಜ್ ಮನ್ಸೂರಿ (30)ಯನ್ನು ಭೇಟಿಯಾಗಿ ಹಣ ಪಡೆದುಕೊಂಡು ಹೋಗಲು ಕಲ್ಯಾಣಕ್ಕೆ ಬಂದಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ ಎಂದು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮನ್ಸೂರ್‌ನನ್ನು ಸಹ ಬಂಧಿಸಲಾಗಿದೆ.

ಡಿಸೆಂಬರ್ 11, 2018ರಿಂದ ತಲೆಮರೆಸಿಕೊಂಡಿದ್ದ ಆತ ಬೇರೆ ಬೇರೆ ರಾಜ್ಯಗಳಲ್ಲಿ ಓಡಾಡಿಕೊಂಡಿದ್ದ. ಇತ್ತೀಚಿಗೆ ಆತ ಸಾಧು ವೇಷ ಧರಿಸಿ ಕುಂಭ ಮೇಳದಲ್ಲಿ ಪಾಲ್ಗೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಿವಿಧ ವೇಷ ಧರಿಸಿ ಆತ ರಾಜಸ್ಥಾನ, ಚಂಡಿಗಢ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಬಿಹಾರ್, ಒಡಿಶಾ ಸುತ್ತಿದ್ದ ಎಂದು ಪೊಲೀಸರಿಗೆ ಮಾಹಿತಿ ಲಭಿಸಿದೆ.

ಕಳೆದ 7 ವರ್ಷಗಳಿಂದ ಡೈಮಂಡ್ ಬ್ರೋಕರ್ ಆಗಿ ಗುರುತಿಸಿಕೊಂಡಿರುವ 25 ವಜ್ರದ ವ್ಯಾಪಾರಿಗಳಿಗೆ ಅಮೂಲ್ಯ ಕಲ್ಲುಗಳನ್ನು ಉತ್ತಮ ದರದಲ್ಲಿ ಮಾರಿ ಕೊಡುವುದಾಗಿ ಆಮಿಷ ಒಡ್ಡಿದ್ದ. ಬಳಿಕ ಅವರ ವಜ್ರದ ಕಲ್ಲುಗಳೊಂದಿಗೆ ನಾಪತ್ತೆಯಾಗಿದ್ದ.

ಪತ್ನಿ ಬಳಿ ನಾನು ಕಾಣೆಯಾಗಿದ್ದೇನೆ ಎಂದು ಪ್ರಕರಣ ದಾಖಲಿಸು ಎಂದಿದ್ದ ಆತ ಈ ಮೂಲಕ ವಜ್ರಗಳೊಂದಿಗೆ ಆತನನ್ನು ಅಪಹರಿಸಲಾಗಿದೆ ಎಂಬಂತೆ ಬಿಂಬಿಸುವ ಯೋಜನೆ ರೂಪಿಸಿದ್ದ, ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.