ಕರ್ನಾಟಕ

ಯಡಿಯೂರಪ್ಪ ಮಾತನಾಡಿದ ಆಡಿಯೋ ಲೀಕ್‌ನಿಂದ ಕಂಗೆಟ್ಟ ಅನರ್ಹ ಶಾಸಕರು!

Pinterest LinkedIn Tumblr

ಬೆಂಗಳೂರು: ಹುಬ್ಬಳ್ಳಿ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಅನರ್ಹ ಶಾಸಕರ ಕುರಿತಾಗಿ ಸಿಎಂ ಬಿಎಸ್ ಯಡಿಯೂರಪ್ಪ ಮಾತನಾಡಿದ ಆಡಿಯೋ ಲೀಕ್ ಬಳಿಕ ಅನರ್ಹ ಶಾಸಕರು ಕಂಗೆಟ್ಟಿದ್ದಾರೆ. ಆಡಿಯೋ ಲೀಕ್ ಅನರ್ಹರ ಕುರಿತಾಗಿ ಬಿಜೆಪಿ ಆಂತರಿಕ ತಿಕ್ಕಾಟವನ್ನು ಬಹಿರಂಗಗೊಳಿಸಿದ್ದು ತಮ್ಮ ಮುಂದಿನ ರಾಜಕೀಯ ಭವಿಷ್ಯ ಏನಾಗಬಹುದು ಎಂಬ ಚಿಂತೆ ಅನರ್ಹ ಶಾಸಕರಿಗೆ ಕಾಡಿದೆ. ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಸರಣಿ ಮಾತುಕತೆಗಳು ನಡೆಯುತ್ತಿದ್ದು ಇನ್ನೆರಡು ದಿನಗಳಲ್ಲಿಅನರ್ಹ ಶಾಸಕರು ಬೆಂಗಳೂರಿನಲ್ಲಿ ಸಭೆ ಸೇರಿ ಮುಂದಿನ ಹೆಜ್ಜೆಯ ಕುರಿತಾಗಿ ಚರ್ಚೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಸೋಮವಾರ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಆಗಮಿಸಿದ ಕೆಲವು ಅನರ್ಹ ಶಾಸಕರು ಸದ್ಯದ ಬೆಳವಣಿಗೆಗಳ ಕುರಿತಾಗಿ ಮಾತುಕತೆ ನಡೆಸಿದರು. ಎಸ್ ಟಿ ಸೋಮಶೇಖರ್, ಮುನಿರತ್ಮ ಹಾಗೂ ಆರ್. ಶಂಕರ್ ರಮೇಶ್ ಜಾರಕಿಹೊಳಿ ಜೊತೆಗೆ ಮಾತುಕತೆ ನಡೆಸಿದರು. ಸಿಎಂ ಯಡಿಯೂರಪ್ಪ ಅವರ ಆಡಿಯೋವನ್ನು ಕಾಂಗ್ರೆಸ್ ಈಗಾಗಲೇ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ. ಈ ಆಡಿಯೋವನ್ನು ಪ್ರಮುಖ ಸಾಕ್ಷಿಯಾಗಿ ಪರಿಗಣಿಸುವಂತೆ ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಇದರ ವಿಚಾರಣೆಯ ಬಳಿಕ ಮಂಗಳವಾರ ಅನರ್ಹ ಶಾಸಕರ ಕುರಿತಾದ ಅಂತಿಮ ತೀರ್ಪು ಹೊರಬೀಳುವ ಸಾಧ್ಯತೆ ಇದೆ.

ಅನರ್ಹ ಶಾಸಕರ ಕುರಿತಾಗಿ ನಡೆಯುತ್ತಿರುವ ಈ ಎಲ್ಲಾ ಬೆಳವಣಿಗೆಗಳಿಂದ ಅವರು ಆತಂಕಕ್ಕೆ ಒಳಗಾಗಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪು ಅನರ್ಹರ ಪರವಾಗಿ ಬಂದರೂ ಅನರ್ಹರ ಕುರಿತಾದ ಬಿಜೆಪಿ ಪಕ್ಷದ ಗೊಂದಲದ ನಿಲುವು ಇವರ ಆತಂಕಕ್ಕೆ ಕಾರಣವಾಗಿದೆ. ಚುನಾವಣೆಯ ಸಂದರ್ಭದಲ್ಲಿ ಗೊಂದಲ ಮುಂದುವರಿದರೆ ಅನರ್ಹರ ರಾಜಕೀಯ ಭವಿಷ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಅಧಿಕವಾಗಿದೆ.

ಗೊಂದಲ ಹೀಗೆ ಮುಂದುವರಿದರೆ ಇತ್ತ ಬಿಜೆಪಿಯೂ ಇಲ್ಲ ಅತ್ತ ಕಾಂಗ್ರೆಸ್ ಇಲ್ಲ ಎಂಬಂತ್ತಾಗುತ್ತದೆ ನಮ್ಮ ಪರಿಸ್ಥಿತಿ ಎಂಬ ಅಭಿಪ್ರಾಯಗಳು ಅನರ್ಹರ ಕಡೆಯಿಂದ ವ್ಯಕ್ತವಾಗಿದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಎಲ್ಲಾ ಅನರ್ಹ ಶಾಸಕರು ಜೊತೆಗೂಡಿ ಸಭೆ ನಡೆಸಿ ಬಳಿಕ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂಬ ಮಾಹಿತಿ ಅನರ್ಹ ಶಾಸಕರ ಮೂಲಗಳಿಂದ ತಿಳಿದುಬಂದಿದೆ.

Comments are closed.