ಕರ್ನಾಟಕ

ಯಡಿಯೂರಪ್ಪರ ವಿವಾದಿತ ಆಡಿಯೋ ರಿಲೀಸ್ ಮಾಡಿಸಿದ್ದೇ ಸಿದ್ದರಾಮಯ್ಯ!

Pinterest LinkedIn Tumblr


ಬೆಂಗಳೂರು: ಅನರ್ಹ ಶಾಸಕರ ಕುರಿತಾಗಿ ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅಸಮಾಧಾನ ಆಡಿಯೋವನ್ನು ಬಿಡುಗಡೆಗೊಳಿಸಿದ್ದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಂತೆ. ಹೀಗೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಆಡಿಯೋ ರಿಲೀಸ್ ಹಿಂದೆ ಸಿದ್ದರಾಮಯ್ಯ ಕೈವಾಡವಿದೆ ಎಂದರು.

ಹುಬ್ಬಳ್ಳಿಯಲ್ಲಿ ನಡೆದಿದ್ದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಅನರ್ಹ ಶಾಸಕರ ಕುರಿತಾಗಿ ಬಿಜೆಪಿ ಕೆಲವು ಮುಖಂಡರ ಹೇಳಿಕೆಯನ್ನು ಸಿಎಂ ಬಿಎಸ್‌ವೈ ವಿರೋಧಿಸಿದ್ದರು. ಸಭೆಯಲ್ಲಿ ಅವರು ಮಾತನಾಡಿದ್ದ ಆಡಿಯೋ ವೈರಲ್ ಆಗಿದ್ದು ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಈ ಹಿಂದೆ ದಿವಂಗತ ಮಾಜಿ ಸಚಿವ ಅನಂತ್ ಕುಮಾರ್ ಹಾಗೂ ಯಡಿಯೂರಪ್ಪ ಮಾತನಾಡಿದ್ದ ವಿಡಿಯೋ ಬಿಡುಗಡೆಗೊಂಡಿತ್ತು. ಈ ವಿಡಿಯೋ ಬಿಡುಗಡೆಯ ಹಿಂದೆ ಸಿದ್ದರಾಮಯ್ಯ ಇದ್ದರು.

ಇದೀಗ ಹುಬ್ಬಳ್ಳಿಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ನಡೆದ ಮಾತುಕತೆಯ ಆಡಿಯೋ ಬಿಡುಗಡೆಯ ಹಿಂದೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇದ್ದಾರೆ ಎಂದು ನಳಿನ್ ಆರೋಪಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಮತ್ತೆ ಸಿಎಂ ಆಗಬೇಕು ಎನ್ನುವ ಆಸೆ ಇದೆ. ರಾಜಕಾರಣ ಮಾಡೋದಕ್ಕಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಹುಬ್ಬಳ್ಳಿಯಲ್ಲಿ ನಡೆದ ಸಭೆಯಲ್ಲಿ ಭಾಗಿಯಾಗಿದ್ದ ಸಿಎಂ ಬಿಎಸ್‌ವೈ ಅನರ್ಹ ಶಾಸಕರ ತ್ಯಾಗದಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆದರೆ ಅವರ ಕುರಿತಾಗಿ ಪಕ್ಷದ ಕೆಲವು ಮುಖಂಡರ ಹೇಳಿಕೆಗಳು ಬೇಸರ ತಂದಿದೆ . ಪ್ರಮುಖರು ನಿಂತು ದೊಡ್ಡ ದೊಡ್ಡ ಮಾತನಾಡಿದ್ದಾರೆ. ಪಕ್ಷದ ಮುಖಂಡರ ಈ ನಡೆ ಸರಿಯಲ್ಲ , ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದಿದ್ದರು.

ಅಲ್ಲದೆ, ನನಗೆ ಮುಖ್ಯಮಂತ್ರಿ ಗಿರಿ ಬೇಕಾಗಿಲ್ಲ ನಾನು ಮೂರು ಬಾರಿ ಸಿಎಂ ಆಗಿದ್ದೇನೆ. ನಮ್ಮನ್ನು ನಂಬಿ ಅನರ್ಹ ಶಾಸಕರು ರಾಜೀನಾಮೆ ನೀಡಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರೇ ಅವರನ್ನು ಮುಂಬೈನಲ್ಲಿ ಇಟ್ಟಿದ್ದರು. ಆದರೆ ಇದೀಗ ಅನರ್ಹರ ತ್ಯಾಗ ನಿಮ್ಮ ಗಮನಕ್ಕೆ ಬರುತ್ತಿಲ್ಲ. ಅನರ್ಹರ ಜಾಗದಲ್ಲಿ ನೀವು ಇದ್ದರೆ ಏನು ಮಾಡುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದರು.

ಆಡಿಯೋ ರಿಲೀಸ್ ಆತಂರಿಕ ತನಿಖೆ

ಹುಬ್ಬಳ್ಳಿ ಬಿಜೆಪಿ ಕೋರ್ ಕಮಿಟಿ ಸಭೆಯ ಆಡಿಯೋ ರಿಲೀಸ್ ಪ್ರಕರಣದ ಕುರಿತಾಗಿ ಬಿಜೆಪಿ ಆಂತರಿಕ ತನಿಖೆ ನಡೆಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಸಭೆಯಲ್ಲಿ ಆಡಿಯೋವನ್ನು ಯಾರು ರೆಕಾರ್ಡ್ ಮಾಡಿದರು, ಹಾಗೂ ಮಾಧ್ಯಮಗಳಿಗೆ ಯಾರು ನೀಡಿದರು ಎಂಬುವುದರ ಕುರಿತಾಗಿ ತನಿಖೆ ನಡೆಸಲಾಗುವುದು ಎಂದರು.

ನಳಿನ್ ಹೇಳಿಕೆಗೆ ಕಾಂಗ್ರೆಸ್ ಆಕ್ರೋಶ

ಬಿಎಸ್‌ವೈ ಆಡಿಯೋ ರಿಲೀಸ್ ಪ್ರಕರಣದ ಹಿಂದೆ ಸಿದ್ದರಾಮಯ್ಯ ಇದ್ದಾರೆ ಎಂಬ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಈ ಕುರಿತಾಗಿ ಮಾತನಾಡಿದ ಮಾಜಿ ಸಂಸದ ವಿಎಸ್ ಉಗ್ರಪ್ಪ ಜನರ ಕಣ್ಣಿಗೆ ಮಣ್ಣೆರೆಚುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಸ್ವತಃ ಆಡಿಯೋದ ಬಗ್ಗೆ ಸಿಎಂ ಬಿಎಸ್‌ವೈ ಒಪ್ಪಿಕೊಂಡಿದ್ದಾರೆ ಎಂದ ಅವರು ಆಡಿಯೋ ಪ್ರಕರಣದ ತನಿಖೆ ನಡೆಯಲಿ ಎಂದಿದ್ದಾರೆ.

Comments are closed.