ಕರ್ನಾಟಕ

ಪಂಜಿನ ಕವಾಯತಿನ ಮೂಲಕ ‘See You’ ಪ್ರದರ್ಶನ ಮುಗಿಯುತ್ತಿದ್ದಂತೆ ‘ಮೈಸೂರು ದಸರಾ 2019’ಕ್ಕೆ ವರ್ಣರಂಜಿತ ತೆರೆ

Pinterest LinkedIn Tumblr


ಮೈಸೂರು: ಎದೆ ಝಲ್ಲೆನ್ನುವ ಕಸರತ್ತು, ಬೆಂಕಿಯೊಂದಿಗೆ ಸರಸಾಟ, ಅತ್ಯಾಕರ್ಷಕ ನೃತ್ಯ ವೈಭವ, ಲೇಸರ್‌ ಬೆಳಕಿನ ನರ್ತನ, ಬಾಣ ಬಿರುಸುಗಳ ಚಿತ್ತಾರ… ಅಬ್ಬಬ್ಬಾ ನೋಡಲು ಎರಡು ಕಣ್ಣು ಸಾಲದು.

ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಮಂಗಳವಾರ ರಾತ್ರಿ ‘See You’ ಎಂಬ ಪ್ರದರ್ಶನ ಮುಗಿಯುತ್ತಿದ್ದಂತೆ ವಿಶ್ವವಿಖ್ಯಾತ ‘ಮೈಸೂರು ದಸರಾ 2019’ಕ್ಕೆ ವರ್ಣರಂಜಿತ ತೆರೆಬಿತ್ತು.

ಎರಡೂವರೆ ಗಂಟೆ ನಡೆದ ಪ್ರದರ್ಶನ ನೆರೆದ ಸಹಸ್ರಾರು ಮಂದಿಯನ್ನು ವಿಸ್ಮಯ ಲೋಕಕ್ಕೆ ಕರೆದೊಯ್ದಿತು. ಚಿತ್ತಾಕರ್ಷಕ ಪಥ ಸಂಚನಲ ನೆರೆದಿದ್ದ ಪ್ರೇಕ್ಷಕರೆದೆಯಲ್ಲಿ ದೇಶಪ್ರೇಮ ಉಕ್ಕಿಹರಿಯುವಂತೆ ಮಾಡಿದರೆ, ಶ್ವೇತಾಶ್ವ ತಂಡದವರ ಬೈಕ್‌ನಲ್ಲಿ ಮೆರೆದ ಚಾಕ ಚಕ್ಯತೆ, ಕುಶಲತೆಯಿಂದ ನೀಡಿದ ಕಸರತ್ತು ಎಲ್ಲರನ್ನೂ ಉಸಿರು ಬಿಗಿಹಿಡಿಯುವಂತೆ ಮಾಡಿತು. ಮತ್ತಷ್ಟು ಕಲಾವಿದರ ನೃತ್ಯ ವೈಭವದ ಮೂಲಕ ಜನರಿಗೆ ಮನರಂಜನೆ ಉಣಬಡಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ರಾಜ್ಯಪಾಲ ವಜೂಭಾಯಿ ವಾಲಾ ಅವರು ಗೌರವ ವಂದನೆ ಸ್ವೀಕರಿಸಿದರು. ರಾಜ್ಯಪಾಲರು ತಮ್ಮ ಸ್ಥಾನಕ್ಕೆ ಮರಳಿದ ಬಳಿಕ 21 ಸುತ್ತು ಕುಶಾಲತೋಪು ಸಿಡಿಸಲಾಯಿತು. ಆ ಬಳಿಕ ಅಶ್ವಾರೋಹಿ ಪಡೆ, ಕೆಎಸ್‌ಆರ್‌ಪಿ ತುಕಡಿಗಳು, ನಗರ ಸಶಸ್ತ್ರ ಮೀಸಲು ಪಡೆ, ಗೃಹರಕ್ಷಕ ದಳ, ಎನ್‌ಸಿಸಿ, ಸೇವಾದಳ ಒಳಗೊಂಡಂತೆ 18 ತಂಡಗಳು ಪಥಸಂಚಲನದಲ್ಲಿ ಪಾಲ್ಗೊಂಡು ವಂದನೆ ಸಲ್ಲಿಸಿದರು.

ಮಿಲಿಟರಿ ಪೊಲೀಸ್‌ ಪಡೆ ತಂಡದವರು 20 ನಿಮಿಷ ನೀಡಿದ ಪ್ರದರ್ಶನ ರೋಚಕತೆಯಿಂದ ಕೂಡಿತ್ತು. 25 ಬೈಕ್‌ಗಳೊಂದಿಗೆ ಅಂಗಳಕ್ಕೆ ಬಂದಾಗ ಜೋರು ಕರತಾಡನ ಕೇಳಿ ಬಂತು. ಜೋರಾಗಿ ಶಬ್ದ ಹೊರಡಿಸುವ ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳಲ್ಲಿ ನೀಡಿದ ಪ್ರದರ್ಶನ ಎದೆ ಝಲ್‌ ಎನಿಸುವಂತೆ ಮಾಡಿತು. ತದ್ವಿರುದ್ಧ ದಿಕ್ಕಿನಲ್ಲಿ ಧಾವಿಸಿದ ಬೈಕ್‌ಗಳು ರೋಮಾಂಚನ ದೃಶ್ಯಗಳನ್ನು ಸೃಷ್ಟಿಸಿತು. ಸೀಸರ್‌ ಕ್ರಾಸಿಂಗ್, ಡೈಮಂಡ್‌ ಕ್ರಾಸಿಂಗ್ ಮಾಡುವಾಗಲಂತೂ ನೆರೆದಿದ್ದವು ಉಸಿರು ಬಿಗಿ ಹಿಡಿದು ಕುಳಿತಿದ್ದರು.

ತಂಡದ ಸದಸ್ಯರು ಬೈಕ್‌ಗಳಲ್ಲಿ ನಾನಾ ಭಂಗಿಗಳಲ್ಲಿ ಕುಳಿತು ಕಸರತ್ತು ಪ್ರದರ್ಶಿಸಿದರು. ಸೀಟ್‌ ಮೇಲೆ, ಇಂಧನ ಟ್ಯಾಂಕ್‌ ಮೇಲೆ ನಿಂತು, ವ್ಯಾಯಾಮ ಮಾಡುತ್ತಾ, ಏಣಿ ಏರುತ್ತಾ, ಸೀಟಿನಲ್ಲಿ ಮಲಗಿಗೊಂಡು ಕಸರತ್ತು ನಡೆಸಿದರು. ಒಂದೇ ಬೈಕ್‌ನಲ್ಲಿ 10 ಮಂದಿಯಿಂದ ಕ್ರಿಸ್‌ಮಸ್‌ ಟ್ರೀ, ವಿಮಾನದ ಆಕೃತಿ, ಸುದರ್ಶನ ಚಕ್ರದ ಮಾದರಿ ನಿರ್ಮಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು.

ಇಬ್ಬರು ಸದಸ್ಯರು ವ್ಹೀಲಿಂಗ್‌ ಮೂಲಕ ಮನರಂಜನೆ ಒದಗಿಸಿದರು. ಚೆಸ್ಟ್‌ ಜಂಪಿಂಗ್‌ ಮತ್ತು ಬೆಂಕಿಯ ರಿಂಗ್‌ನೊಳಗೆ ಬೈಕ್‌ ಚಾಲನೆ ಮಾಡಿ ಪ್ರೇಕ್ಷಕರ ಗಮನ ಸೆಳೆದರು. ಅಶ್ವಾರೋಹಿ ಪಡೆ 15 ನಿಮಿಷ ನಡೆಸಿದ ಟೆಂಟ್‌ ಪೆಗ್ಗಿಂಗ್‌ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ನೆಲದಲ್ಲಿ ನೆಟ್ಟಿದ್ದ ಉರಿಯುವ ಗೂಟಗಳನ್ನು ವೇಗವಾಗಿ ಕುದುರೆ ಸವಾರಿ ಮಾಡುತ್ತಾ ಬಂದು ಭರ್ಚಿಯಿಂದ ಮೇಲಕ್ಕೆತ್ತುವ ಸಾಹಸಕ್ಕೆ ಎಲ್ಲರೂ ತಲೆದೂಗಿದರು.

ಕೊನೆಯಲ್ಲಿ ಪ್ರಶಿಕ್ಷಣಾರ್ಥಿಗಳು ಪಂಜಿನ ಕವಾಯತು ಪ್ರದರ್ಶಿಸಿದರು. ‘ಸುಸ್ವಾಗತ’, ‘ಕರ್ನಾಟಕ ಪೊಲೀಸ್’, ‘ವೆಲ್‌ಕಂ ಟು ಆಲ್’, ‘ಜೈ ಚಾಮುಂಡಿ’ ಆಕೃತಿಗಳನ್ನು ನಿರ್ಮಿಸಿದರು. ಆಕರ್ಷಕ ಬಾಣ ಬಿರುಸುಗಳ ಚಿತ್ತಾರದೊಂದಿಗೆ ಕಾರ್ಯಕ್ರಮಕ್ಕೆ ತೆರೆಬಿತ್ತು.

ಮುಖ್ಯಮಂತ್ರಿ ಯಡಿಯೂರಪ್ಪ ಕೊನೆಯವರೆಗೂ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.

Comments are closed.