ಕರ್ನಾಟಕ

“ನನ್ನ ಹೆಸರಿನಲ್ಲಿ ಯಾವುದೇ ಪವರ್ ಪ್ಲಾಂಟ್ ಇಲ್ಲ” ದೇವಿ ಮೇಲಾಣೆ ಇಟ್ಟ ಶಾಸಕಿ ಲಕ್ಷ್ಮೀಹೆಬ್ಬಾಳ್ಕರ್

Pinterest LinkedIn Tumblr

ಬೆಳಗಾವಿ, ಅ.3: ಸೋಲಾರ್ ಪವರ್ ಪ್ಲಾಂಟ್ ಪ್ರಾಜೆಕ್ಟ್ ನನ್ನ ಹೆಸರಿನಲ್ಲಿ ಇಲ್ಲ. ಇದ್ದರೆ ಅದನ್ನು ರಾಜ್ಯದ ಬೊಕ್ಕಸಕ್ಕೆ ಬರೆದುಕೊಡುತ್ತೇನೆ ಎಂದು ಶಾಸಕಿ ಲಕ್ಷ್ಮೀಹೆಬ್ಬಾಳ್ಕರ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ದಸರಾ ಹಬ್ಬವಿದೆ. ಚಾಮುಂಡೇಶ್ವರಿ ದೇವಿ ಮೇಲಾಣೆ ಮಾಡಿ ಹೇಳುತ್ತೇನೆ. ನನ್ನ ಹೆಸರಿನಲ್ಲಿ ಯಾವುದೇ ಪವರ್ ಪ್ಲಾಂಟ್ ಇಲ್ಲ ಎಂದರು.

ಹರ್ಷಶುಗರ್ಸ್‍ಗೆ ಸಂಬಂಧಿಸಿದಂತೆ 120 ಕೋಟಿ ವಿಚಾರ ಬರಿ ಆರೋಪ ಅಷ್ಟೆ. ಅದು ಸಾಬೀತಾಗಿರುವುದಲ್ಲ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ತನಿಖಾ ಏಜೆನ್ಸ್‍ಗಳು ಸೂಕ್ತ ತನಿಖೆ ಮಾಡುತ್ತಿದ್ದಾರೆ. ಕಪೋಲಕಲ್ಪಿತ ಸುದ್ದಿಗಳಿಗೆ ನಾನು ಜವಾಬ್ದಾರರಲ್ಲ ಎಂದು ಹೇಳಿದರು. ಗೋವಾ ಅಧಿಕಾರಿಗಳು ನನ್ನ ಮೇಲೆ ದಾಳಿ ಮಾಡಿದಾಗ ಸಂಬಂಧಪಟ್ಟ ದಾಖಲಾತಿಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದರು.

ಅಪೆಕ್ಸ್ ಬ್ಯಾಂಕ್ ನನ್ನ ತಮ್ಮನ ಸಕ್ಕರೆ ಕಾರ್ಖಾನೆಯಷ್ಟೇ ಅಲ್ಲ ಬೇಕಾದಷ್ಟು ಮಂದಿಗೆ ಸಾಲ ಕೊಟ್ಟಿದೆ. 10ಸಾವಿರ ಸಾಲ ಪಡೆಯಬೇಕು ಎಂದರೆ ಸಾಕಷ್ಟು ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಅಪೆಕ್ಸ್ ಬ್ಯಾಂಕ್ ಸಾಲ ಕೊಟ್ಟಾಗ ನನ್ನ ಹರ್ಷಶುಗರ್ಸ್‍ಗೆ ಬೆಸ್ಟ್ ಕ್ರಷಿಂಗ್ ಕಾರ್ಖಾನೆ ಎಂದು ಅವಾರ್ಡ್ ಸಿಕ್ಕಿದೆ ಎಂದರು.

ಡಿ.ಕೆ.ಶಿವಕುಮಾರ್ ಅವರ ಪ್ರಕರಣ ಇಡಿಯಿಂದ ಸಿಬಿಐಗೆ ಹೋಗುತ್ತಿರುವ ವಿಷಯ ನನಗೆ ಗೊತ್ತಿಲ್ಲ ಎಂದು ತಿಳಿಸಿದರು. ನೆರೆ ಸಂತ್ರಸ್ತರಿಗೆ ಪರಿಹಾರ ಕೊಡಿಸಲು ಪ್ರಯತ್ನ ಮಾಡುತ್ತೇವೆ. ನಾವೂ ಕೂಡ ಪರಿಹಾರಕ್ಕೆ ಬಕಪಕ್ಷಿಗಳಂತೆ ಕಾಯುತ್ತಿದ್ದೇವೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Comments are closed.