ಕರ್ನಾಟಕ

ಮೋದಿ ನಿಮಗೆ ದೇವರಾದರೆ, ನೀವೇ ಪೂಜೆ ಮಾಡಿ: ಪ್ರತಾಪ್ ಸಿಂಹ ಹೇಳಿಕೆಗೆ ಕೆಂಡಮಂಡಲ

Pinterest LinkedIn Tumblr


ಬೆಂಗಳೂರು: ಮೋದಿ ದೇವರಿದ್ದಂತೆ, ಅವರನ್ನು ಬೈದರೆ ದೇವರನ್ನೇ ಬೈದಂತೆ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಪ್ರತಿಪಕ್ಷಗಳ ನಾಯಕರು ಕೆಂಡಮಂಡಲವಾಗಿದ್ದಾರೆ.

ಮೋದಿ ನಿಮ್ಮ ದೇವರಾದರೆ, ನೀವೇ ಪೂಜೆ ಮಾಡಿ. ಆದರೆ ರಾಜ್ಯದ ಜನತೆಗೆ ಮೊದಲು ಪರಿಹಾರ ಕೊಡಿ. ಸಂಸದ ಪ್ರತಾಪ್ ಸಿಂಹಗೆ ವಿರೋಧ ಪಕ್ಷಗಳ ನಾಯಕರು ತಾಕೀತು ಮಾಡಿದ್ದಾರೆ.

ಮಾಜಿ ಡಿಸಿಎಂ ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿ, ಪ್ರವಾಹ ಪರಿಸ್ಥಿತಿ ನಿಭಾಯಿಸುವುದರಲ್ಲಿ ನೀವು ಎಡವಿದ್ದೀರಿ. ಅನುಕಂಪ ತೋರಿಸದ ಪ್ರಧಾನಿ ನರೇಂದ್ರ ಮೋದಿ ದೇವರಾ..? ಮೋದಿ ನಿಮ್ಮ ದೇವರಾದರೆ, ನೀವೇ ಪೂಜೆ ಮಾಡಿ. ಆದರೆ ರಾಜ್ಯದ ಜನತೆಗೆ ಮೊದಲು ಪರಿಹಾರ ಕೊಡಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ನಾಯಕರಾದ ಹೆಚ್.ಕೆ. ಪಾಟೀಲ್ ಮಾತನಾಡಿ, ಉತ್ತರ ಕರ್ನಾಟಕದ 20 ಲಕ್ಷ ಜನ ಪ್ರವಾಹಕ್ಕೆ ತುತ್ತಾಗಿ ನೆಲೆ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಇಂತಹ ಕಷ್ಟಕರ ಸನ್ನಿವೇಶದಲ್ಲಿ ಸಂಸದ ಪ್ರತಾಪ್ ಸಿಂಹ ಜನರ ಕಷ್ಟಕ್ಕೆ ಸ್ಪಂದಿಸದೆ ಬೇಜವಾಬ್ದಾರಿ ಹೇಳಿಕೆ ಕೊಡುವ ಮೂಲಕ ಪ್ರಧಾನಿಯನ್ನು ಮೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಸಂಸದ ಪ್ರತಾಪ್ ಸಿಂಹ ವಿರೋಧ ಪಕ್ಷಗಳನ್ನು ಟೀಕಿಸುವ ಭರದಲ್ಲಿ, ಮೋದಿ ದೇವರಿದ್ದಂತೆ, ಅವರನ್ನು ಬೈದರೆ ದೇವರನ್ನೇ ಬೈದಂತೆ. ಅವರು ಆಕಾಶದ ಎತ್ತರದಲ್ಲಿದ್ದಾರೆ ಅವರನ್ನು ಉಗಿದರೆ ಅದು ನಿಮ್ಮ ಮೇಲೆಯೇ ಬೀಳುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

Comments are closed.