ಬಣಕಲ್: ನೆರೆಪೀಡಿತ ಪ್ರದೇಶಗಳಾದ ಬಾಳೂರು, ಚನ್ನಡ್ಲು, ಕೂವೆ ಗ್ರಾಮಗಳಲ್ಲಿ ಸ್ವಲ್ಪ ಮಳೆ ಬಂದರೂ ಗುಡ್ಡ ನಿಧಾನಕ್ಕೆ ಕುಸಿಯುತ್ತಿರುವುದನ್ನು ತಡೆಯಲು ಗಬ್ಗಲ್ನ ಟಾಟಾ ಕಾಫಿ ತೋಟದ ವ್ಯವಸ್ಥಾಪಕ ತಂಡ ಕುಸಿತವಾದ ಜಾಗದಲ್ಲಿ ಲಾವಂಚ ಹುಲ್ಲು ನಾಟಿ ಮಾಡಲು ಮುಂದಾಗಿದೆ.
ಬಾಳೂರು, ಚನ್ನಡ್ಲು, ಕೂವೆಯ ಮುಖ್ಯರಸ್ತೆ ಬದಿಯಲ್ಲಿ ಲಾವಂಚ ಹುಲ್ಲು ನಾಟಿ ಮಾಡಲಾಗುತ್ತಿದೆ. ಇದರ ಬೇರುಗಳು 6 ರಿಂದ 7 ಅಡಿವರೆಗೂ ಮಣ್ಣಿನಾಳಕ್ಕೆ ಇಳಿದು ಮಣ್ಣನ್ನು ಬಿಗಿಗೊಳಿಸಿ ಕುಸಿಯದಂತೆ ತಡೆಯುತ್ತದೆ. ಈ ಹುಲ್ಲಿನ ಒಂದು ಕಾಂಡ ಮೂರು ವರ್ಷಗಳಲ್ಲಿ ಒಂದು ಅಡಿ ಅಗಲ ಬೆಳೆಯಲಿದ್ದು ಕಾಂಡದಲ್ಲಿ 60 ರಿಂದ 75 ಸಸಿಗಳು ಇರುತ್ತವೆ.
ತಮಿಳುನಾಡಿನಿಂದ ಸುಮಾರು 4 ಸಾವಿರ ಲಾವಂಚ ಹುಲ್ಲು ತರಲಾಗಿದ್ದು ಭೂ ಸವಕಳಿ ತಡೆಯಲು ಟಾಟಾ ಕಂಪನಿ ಈ ಪ್ರಯೋಗಕ್ಕೆ ಮುಂದಾಗಿದೆ. ಕಂಪನಿಯ 28 ಕಾರ್ವಿುಕರು ಹುಲ್ಲು ನಾಟಿ ಕಾರ್ಯದಲ್ಲಿ ತೊಡಗಿದ್ದಾರೆ ಎನ್ನುತ್ತಾರೆ ಟಾಟಾ ಕಾಫಿ ತೋಟದ ವ್ಯವಸ್ಥಾಪಕ ಜೀವನ್.
ಚಾರ್ವಡಿ ಘಾಟ್ ಮತ್ತು ಕೊಟ್ಟಿಗೆಹಾರ ಹೊರನಾಡು ಮಾರ್ಗದ ಇಕ್ಕೆಲಗಳಲ್ಲಿ ಅಲ್ಲಲ್ಲಿ ಗುಡ್ಡ ಕುಸಿದಿವೆ. ಈ ಸ್ಥಳಗಳಲ್ಲಿ ಲಾವಂಚ ಹುಲ್ಲು ನೆಟ್ಟರೆ ಗುಡ್ಡ ಕುಸಿತವಾಗುವುದನ್ನು ತಡೆಯಬಹುದು. ಈ ಬಗ್ಗೆ ಅರಣ್ಯ ಇಲಾಖೆ ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗಮನ ಹರಿಸಬೇಕಿದೆ.
Comments are closed.