ಕರ್ನಾಟಕ

ಶ್ರೀಗಳ ಅಭಿಪ್ರಾಯ ವೈಯಕ್ತಿಕ; ಬಿಜೆಪಿ ಸರ್ಕಾರ ಅವಧಿ ಪೂರ್ಣಗೊಳಿಸುತ್ತದೆ; ಅಶ್ವಥ್ ನಾರಾಯಣ್

Pinterest LinkedIn Tumblr


ಬೆಂಗಳೂರು(ಸೆ.20): ಮುಂದಿನ ದಿನಗಳಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಶುಭ ಸೂಚನೆ ಇದೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದರು. ಈ ಬೆನ್ನಲ್ಲೀಗ ಕೋಡಿ ಶ್ರೀಗಳ ಹೇಳಿಕೆಗೆ ಡಿಸಿಎಂ ಅಶ್ವಥ್ ನಾರಾಯಣ್ ಪ್ರತಿಕ್ರಿಯಿಸಿದ್ದಾರೆ. “ಕೋಡಿ ಶ್ರೀಗಳದ್ದು ವೈಯಕ್ತಿಕ ಅಭಿಪ್ರಾಯ. ನೂರಕ್ಕೆ ನೂರರಷ್ಟು ಬಿಜೆಪಿ ಸರ್ಕಾರ ಅವಧಿ ಪೂರ್ಣಗೊಳಿಸುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಬಿಜೆಪಿ ಹಿರಿಯ ನಾಯಕ ಅಶ್ವಥ್ ನಾರಾಯಣ್, ಸಿದ್ದರಾಮಯ್ಯ ಬಗ್ಗೆ ಕೋಡಿ ಶ್ರೀಗಳು ನೀಡಿದ ಹೇಳಿಕೆ ವೈಯಕ್ತಿಕ ಅಭಿಪ್ರಾಯ. ಬಿಜೆಪಿ ಸರ್ಕಾರ ಅವಧಿ ಪೂರ್ಣಗೊಳಿಸುತ್ತದೆ ಎಂಬ ವಿಶ್ವಾಸವಿದೆ. ಈಗಷ್ಟೇ ಅಲ್ಲ ಮುಂದೆಯೂ ಬಿಜೆಪಿ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ನಾವು ಇನ್ನಷ್ಟು ಸಧೃಡವಾಗಲಿದ್ದೇವೆ ಎಂದು ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.

ನಾವು ವಿಧಾನಸಭೆ ಚುನಾವಣೆಯಾಗಲೀ, ಲೋಕಸಭೆ ಚುನಾವಣೆಯಾಗಲೀ ಎದುರಿಸಲು ಸಿದ್ಧರಿದ್ದೇವೆ. ಕಾಂಗ್ರೆಸ್​​, ಜೆಡಿಎಸ್​​ಗೆ ಚುನಾವಣಾ ಭೀತಿ ಶುರುವಾಗಿದೆ. ಮಧ್ಯಂತರ ಚುನಾವಣೆಗೆ ಹೋಗಲು ಯಾರು ತಯಾರಿಲ್ಲ. ಆದರೆ, ಸಿದ್ದರಾಮಯ್ಯ ಮತ್ತು ಎಚ್​​.ಡಿ ಕುಮಾರಸ್ವಾಮಿ ಚುನಾವಣೆ ಎನ್ನುವ ಮೂಲಕ ಅನರ್ಹ ಶಾಸಕರನ್ನು ಹೆದರಿಸುತ್ತಿದ್ದಾರೆ ಎಂದು ಹೇಳಿದರು.

ಹೀಗೆ ಮಾತು ಮುಂದುವರೆಸಿದ ಅಶ್ವತ್ಥ್ ನಾರಾಯಣ್, ಯಾರಿಗೂ ಮಧ್ಯಂತರ ಚುನಾವಣೆ ಬೇಕಿಲ್ಲ. ಸಿದ್ದರಾಮಯ್ಯ ಮತ್ತು ಎಚ್​​.ಡಿ ಕುಮಾರಸ್ವಾಮಿಗೆ ಚುನಾವಣೆ ಕಂಡರೆ ಭಾರೀ ಹೆದರಿಕೆ. ಚುನಾವಣೆಯೆಂದರೆ ಅವರಿಗೆ ನಿದ್ದೆಯೇ ಬರಲ್ಲ. ನಾವು ಎಲ್ಲಾ ಚುನಾವಣೆಗಳು ಸಿದ್ಧರಿದ್ದೇವೆ. ನಾವು ಅಧಿಕಾರಕ್ಕೆ ಬರುವ ಮುನ್ನ ಯಾವುದೇ ಚುನಾವಣೆ ಬರುವುದಿಲ್ಲ ಎಂದರು.

ಇಂದು ಹಾಸನದ ಅರಸೀಕೆರೆ ತಾಲ್ಲೂಕಿನ ಗಂಗೆಮಡುವಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೋಡಿ ಶ್ರೀಗಳು ಭಾಗಿಯಾಗಿದ್ದರು. ಈ ವೇಳೆ ಮತ್ತೆ ಕೆಲವೇ ತಿಂಗಳಲ್ಲಿ ಚುನಾವಣೆ ಬರಲಿದೆ. ಸಿದ್ದರಾಮಯ್ಯರಿಗೆ ನೀವು ರಾಜ್ಯದ ಗದ್ದುಗೆ ಹಿಡಿದಿದ್ದೀರಿ, ನೀವು ದೆಹಲಿಯ ಗದ್ದುಗೆ ಹಿಡಿಯಿರಿ ಎಂದು ಸಲಹೆ ನೀಡುತ್ತಿದ್ದೇನೆ. ಹಾಲುಮತ ಸಮಾಜದವರು ಇಡೀ ಭಾರತದಾದ್ಯಂತ ಎಲ್ಲಾ ರಾಜ್ಯಗಳಲ್ಲಿ ನೆಲೆಸಿದ್ದಾರೆ. ನಾನು ಹಿಂದೆಯೇ ಹೇಳಿದ್ದೆ ಕಂಬಳಿ ಹಾಸೀತು ಹಂಬಳಿ ಹಳಸೀತು, ಸಿದ್ದು ಗದ್ದುಗೆ ಹಾಸೀತು ಎಂದು ಈ ಹಿಂದೆಯೇ ಹೇಳಿದ್ದೆ. ಆಗ ಸಿದ್ದರಾಮಯ್ಯ ಸಿಎಂ ಆಗಿದ್ದರು ನನ್ನ ಮಾತು ಸುಳ್ಳಾಗಲಿಲ್ಲ. ಈಗ ಮತ್ತೆ ಸಿದ್ದರಾಮಯ್ಯಗೆ ಶುಭಸೂಚನೆ ಇದೆ ಎಂದು ಭವಿಷ್ಯ ನುಡಿದಿದ್ದರು.

ಕಳೆದ ವಾರವಷ್ಟೇ ಬಿಜೆಪಿ ಸರ್ಕಾರಕ್ಕೆ ಕಂಟಕ ಎದುರಾಗಲಿದೆ. ಎರಡು ತಿಂಗಳು ಕಾದು ನೋಡಿ ಎಂದು ಕೋಡಿಶ್ರೀ ಹೇಳಿದ್ದರು.

Comments are closed.