ವಿಜಯಪುರ: ಪ್ರಿಯಕರ ಫೇಸ್ಬುಕ್ನಲ್ಲಿ ತಮ್ಮಿಬ್ಬರ ಫೋಟೋ ಹಾಕಿ ಪ್ರಚಾರ ಮಾಡಿದ ಎಂಬ ಕಾರಣಕ್ಕೆ ಸುಧಾರಾಣಿ ಎಂಬ ಯುವತಿ ಸೀಮೆಎಣ್ಣೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಈಗ ಆ ಯುವಕ ತಾನೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದಾನೆ.
ಸಿಂದಗಿ ತಾಲೂಕಿನ ಬೂದಿಹಾಳದ ಪಿ.ಎಚ್. ಗ್ರಾಮದ ಸುಧಾರಾಣಿ ಬಿರಾದಾರ(23) ಹಾಗೂ ಕೆರೂಟಗಿ ಗ್ರಾಮದ ಶಿವಾನಂದ ಪರಸ್ಪರ ಪ್ರೀತಿಸುತ್ತಿದ್ದರು. ಹೊರಗೆ ಸುತ್ತಾಡಲು ಹೋದಾಗ ಹಲವು ಸೆಲ್ಫಿಗಳನ್ನು ತೆಗೆದುಕೊಂಡಿದ್ದರು. ಆ ಫೋಟೋಗಳನ್ನು ಶಿವಾನಂದ್ ತನ್ನ ಫೇಸ್ಬುಕ್ನಲ್ಲಿ ಹಾಕಿಕೊಂಡಿದ್ದ. ಇದರಿಂದಲೇ ಮನನೊಂದು ಸುಧಾರಾಣಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿತ್ತು. ಮಾಧ್ಯಮಗಳಲ್ಲೂ ಹಾಗೇ ಸುದ್ದಿಯಾಗಿದೆ.
ಇದೀಗ ಶಿವಾನಂದ ತನ್ನ ಫೇಸ್ಬುಕ್ನಲ್ಲಿ ಪೋಸ್ಟ್ವೊಂದನ್ನು ಹಾಕಿಕೊಂಡಿದ್ದಾನೆ. ನನ್ನ ಪ್ರೀತಿಯ ಹುಡುಗಿ ಸತ್ತಿದ್ದು ನಾನು ಫೇಸ್ಬುಕ್ನಲ್ಲಿ ಫೋಟೋ ಹಾಕಿದೆ ಎಂಬ ಕಾರಣಕ್ಕೆ ಅಲ್ಲ. ಆಕೆಯದ್ದು ಆತ್ಮಹತ್ಯೆಯಲ್ಲ. ಕೊಲೆ. ಆಸ್ತಿಗೋಸ್ಕರ ಅವಳನ್ನು ಕೊಲೆ ಮಾಡಲಾಗಿದೆ ಎಂದು ಹೇಳಿದ್ದಾನೆ.
ನನ್ನ ಹುಡುಗಿಗೆ ಅವರ ಮನೆಯವೇ ಕಿರುಕುಳ ನೀಡಿ ಸಾಯುವಂತೆ ಮಾಡಿದ್ದಾರೆ. ಆಸ್ತಿಗಾಗಿ ಪ್ರಾಣ ತೆಗೆದು ಬೇರೆಯವರ ಮೇಲೆ ಆರೋಪ ಹೊರಿಸಲು ನೋಡುತ್ತಿದ್ದಾರೆ. ಇಂಥ ಸಮಾಜದಲ್ಲಿ ಬದುಕಲು ನನಗೆ ಅಸಹ್ಯವಾಗುತ್ತಿದೆ. ಹಾಗಾಗಿ ನಾನೂ ಸಹ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಅಲ್ಲಾದರೂ ನಾವಿಬ್ಬರೂ ನೂರು ವರ್ಷ ಬದುಕಲಿ ಎಂದು ನೀವೆಲ್ಲರೂ ಆಶೀರ್ವಾದ ಮಾಡಿ. ನಾನು ಸತ್ತ ಮೇಲೆ ನನ್ನ ದೇಹದ ಯಾವುದೇ ಭಾಗವಾದರೂ ಆಗಲಿ ದಾನ ಮಾಡಿ. ಈ ಆಸೆ ನೆರವೇರಿಸಿ ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾನೆ.
Comments are closed.