ಕರ್ನಾಟಕ

ದಿಢೀರ್ ಪ್ರತ್ಯಕ್ಷವಾಗಿ ರಾಜಕಾರಣಿಗಳ ಹೆಸರು ಬಹಿರಂಗ ಪಡಿಸಿದ ಐಎಂಎ ಹಗರಣದ ಆರೋಪಿ ಮನ್ಸೂರ್ ಖಾನ್

Pinterest LinkedIn Tumblr


ಬೆಂಗಳೂರು: ಐಎಂಎ ಹಗರಣದ ಆರೋಪಿ ಮನ್ಸೂರ್ ಖಾನ್ ಯುಟ್ಯೂಬ್‍ನಲ್ಲಿ ದಿಢೀರ್ ಪ್ರತ್ಯಕ್ಷವಾಗಿದ್ದು, ಹಗರಣದ ಸಂಬಂಧ ರಾಜಕಾರಣಿಗಳ ಹೆಸರುಗಳನ್ನು ಬಹಿರಂಗ ಪಡಿಸಿದ್ದಾನೆ.

ಮನ್ಸೂರ್ ಖಾನ್ ಮಾತನಾಡುತ್ತಿರುವ ವಿಡಿಯೋ ರಿಲೀಸ್ ಆಗಿದ್ದು, ಈ ವಿಡಿಯೋದಲ್ಲಿ ತನ್ನ ಸಂಸ್ಥೆಯನ್ನು ಮುಚ್ಚಲು ಪ್ರಯತ್ನ ಪಟ್ಟಿದ್ದಕ್ಕೆ ರಾಜಕಾರಣಿಗಳು, ಉದ್ಯಮಿಗಳಿಗೆ ಮನ್ಸೂರ್ ಧನ್ಯವಾದ ತಿಳಿಸಿದ್ದಾನೆ.

ವಿಡಿಯೋದಲ್ಲಿ ಏನಿದೆ?
ರಾಜ್ಯಸಭಾ ಮಾಜಿ ಸದಸ್ಯ ರೆಹಮಾನ್ ಖಾನ್, ಮೊಹಮದ್ ಉಬೇದುಲ್ಲಾ ಶರೀಫ್, ಪಾಸ್‍ಬನ್ ಪತ್ರಿಕೆ ಸಂಪಾದಕ ಶರೀಫ್, ಟಾಡಾ ಟೆರರಿಸ್ಟ್ ಮುಕ್ತಾರ ಅಹಮದ್, ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಶರವಣ, ರಿಯಲ್ ಎಸ್ಟೇಟ್ ಉದ್ಯಮಿ ಫೈರೋಜ್ ಅಬ್ದುಲ್ಲಾ, ಪ್ರೆಸ್ಟೀಜ್ ಗ್ರೂಪ್ ಇರ್ಫಾನ್ ಸೇರಿ ನನ್ನನ್ನು ಮುಗಿಸಿದ್ದಾರೆ. ಐಎಂಎ ಮುಗಿಸಲು ಎಲ್ಲರೂ ಸಫಲರಾಗಿದ್ದಕ್ಕೆ ಅವರಿಗೆ ಧನ್ಯವಾದಗಳು.

ರಾಜಕಾರಣಿಗಳು, ಹೂಡಿಕೆದಾರರು ನನ್ನ ಕುತ್ತಿಗೆ ಮೇಲೆ ಬಂದು ಕುಳಿತಿದ್ದರು. ಅವರಿಂದ ತಪ್ಪಿಸಿಕೊಳ್ಳಲು, ನನ್ನ ಸಹಾಯಕ್ಕೆ ಯಾರು ಇಲ್ಲದ ಕಾರಣ ನಾನು ಕುಟುಂಬದ ಜೊತೆ ಹೊರಡಬೇಕಾಯಿತು. ಜೂನ್ 24ರಂದು ಮರಳಿ ಬೆಂಗಳೂರಿಗೆ ಬರುವ ಪ್ಲಾನ್ ಮಾಡಿದ್ದೆ. ಆದರೆ ನನ್ನ ಪಾಸ್‍ಪೋರ್ಟ್, ಟಿಕೆಟ್ ತಡೆ ಹಿಡಿಯಲಾಯಿತು.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರಿಗೆ ನಾನು ಮನವಿ ಮಾಡುತ್ತೇನೆ. ಜನರಿಗೆ ನೀವು ನ್ಯಾಯ ಒದಗಿಸುತ್ತೀರೆಂಬ ನಂಬಿಕೆ ಇದೆ. ಈ ಹಗರಣದ ಹಿಂದೆ ಇರುವ ಸತ್ಯಾಸತ್ಯೆಯನ್ನು ನಾನು ಬಿಚ್ಚಿಡುತ್ತೇನೆ. ಕಾನೂನು ಯಾವುದೇ ಕ್ರಮಕೈಗೊಂಡರೂ ನಾನು ತಲೆಬಾಗುತ್ತೇನೆ. ಭಾರತದಲ್ಲಿದ್ದ ನಂಬರಿನಲ್ಲೇ ನಾನು ಸಂಪರ್ಕದಲ್ಲಿದ್ದೇನೆ.

21 ಸಾವಿರ ಹೂಡಿಕೆದಾರರಿಗೆ ಕಳೆದ 13 ವರ್ಷಗಳಿಂದ ಹಣ ನೀಡಿದ್ದೇನೆ. ಯಾರಿಗೂ ಮೋಸ ಮಾಡಿಲ್ಲ. ಭಾರತದಾದ್ಯಂತ ಬಡ ವಿದ್ಯಾರ್ಥಿಗಳಿಗ ಸಹಾಯ ಮಾಡಿದ್ದೇನೆ. 7 ಸಾವಿರ ಮನೆಗಳಿಗೆ ಪಡಿತರ ಕೊಡುತ್ತಿದ್ದೆ. ಇಷ್ಟು ಸಹಾಯ ಮಾಡಿದರೂ ನನಗೆ ಕರುಣೆ ತೋರಿಲ್ಲ. ಇದು ನನಗೆ ಬೇಸರ ತಂದಿದೆ. ಐಎಂಎ 13 ವರ್ಷದಿಂದ 12 ಸಾವಿರ ಕೋಟಿ ಲಾಭಗಳಿಸಿದೆ. 2006ರಿಂದ 2019 ರವರೆಗೆ ಐಎಂಎ ಸಂಸ್ಥೆ ನಡೆದಿದೆ. 2 ಸಾವಿರ ಕೋಟಿ ಕ್ಯಾಪಿಟಲ್ ಇನ್ವೆಸ್ಟ್‍ಮೆಂಟ್‍ನ್ನ ಕೊಟ್ಟಿದ್ದೇವೆ ಎಂದು ಕಂಪನಿ ಬಗ್ಗೆ ಮಾಹಿತಿ ನೀಡಿದ್ದಾನೆ.

ನಾನು ಭಾರತಕ್ಕೆ ಬಂದರೆ ಜೀವ ಬೆದರಿಕೆಯಿದೆ. ಪೊಲೀಸ್ ಕಸ್ಟಡಿಯಲ್ಲಿಯೇ ನನ್ನನ್ನು ಹೊಡೆದು ಹಾಕಲು ಕೆಲವರು ಸಂಚು ರೂಪಿಸಿದ್ದರು. ಹೀಗಾಗಿ ಕುಟುಂಬ ಸಮೇತ ಬೆಂಗಳೂರು ಬಿಟ್ಟು ಬಂದೆ. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದರೆ ನಾನು ಎದುರಿಸಲು ಸಿದ್ಧನಿದ್ದೇನೆ. ನಾನು ತಪ್ಪಿತಸ್ಥ ಎನ್ನುವುದಾದರೆ ನನ್ನ ಹಿಂದೆ ಅನೇಕರು ಇದ್ದಾರೆ. ಅವರಿಗೂ ಶಿಕ್ಷೆಯಾಗಲಿ.

ಈಗಾಗಲೇ ಒಂದು ಆಡಿಯೋ ಬಿಡುಗಡೆ ಮಾಡಿದ್ದೇನೆ. ಅದಾದ ನಂತರ ಇದೇ ಮೊದಲ ನನ್ನ ವಿಡಿಯೋ ಬಿಡುಗಡೆ ಮಾಡುತ್ತಿರುವೆ. ಶೇ.99 ರಷ್ಟು ನನ್ನ ವಿರುದ್ಧ ತಪ್ಪು ಸಂದೇಶ ರವಾನೆ ಮಾಡುತ್ತಿದ್ದಾರೆ. ಹೀಗಾಗಿ ಶೇ.1 ರಷ್ಟು ಜನ ಮಾತ್ರ ನನ್ನ ಬೆಂಬಲಕ್ಕೆ ಇದ್ದಾರೆ. ಐಎಂಎ ಬಿಸಿನೆಸ್ ನಿಜವಾದ ಉದ್ಯಮವಾಗಿತ್ತು. ಇದನ್ನು ಯಾರೋ ಕಿಡಿಗೇಡಿಗಳು ಬೇಕು ಅಂತಲೇ ಹಾಳು ಮಾಡುತ್ತಿದ್ದಾರೆ. ಐಎಂಎ ಮುಳುಗಿಸಲು ಯಾರು ಪ್ರಯತ್ನ ಪಟ್ಟಿದ್ದಾರೋ ಅವರ ಪಟ್ಟಿ ನನ್ನ ಬಳಿಯಿದೆ. ಎಲ್ಲರ ಹೆಸರುಗಳನ್ನು ನಿಮ್ಮ ಮುಂದೆ ಬಹಿರಂಗಪಡಿಸುವೆ. ಇದರಲ್ಲಿ ಭಾಗಿಯಾದವರು ಸಣ್ಣಪುಟ್ಟವರಲ್ಲ.

ಈ ಕಂಪನಿ ದೊಡ್ಡ ದೊಡ್ಡವರ ಹೆಸರುಗಳಲ್ಲಿ ನಡೆಯುತ್ತಿತ್ತು. ಅವರ ಹೆಸರುಗಳನ್ನ ಬಹಿರಂಗಪಡಿಸಿದರೆ ನನ್ನ ಕುಟುಂಬಕ್ಕೆ ತೊಂದರೆಯಾಗುತ್ತದೆ. ನನ್ನ ಕುಟುಂಬ ಭಾರತದಲ್ಲೇ ಇದೆ. ನಾನು ದೊಡ್ಡವರ ಹೆಸರುಗಳನ್ನ ತಗೆದುಕೊಂಡರೇ ನನ್ನ ಕುಟುಂಬ ಮುಗಿಸಿಬಿಡುತ್ತಾರೆ. ನಾನು ಭಾರತಕ್ಕೆ ಬಂದರೆ ನನ್ನನ್ನು ಮುಗಿಸುವ ಸಾಧ್ಯತೆಯಿದೆ. ಬಾಯಿ ಮುಚ್ಚಿಸಲು ಎಲ್ಲಾ ಪ್ಲಾನ್‍ಗಳನ್ನ ಮಾಡಲಾಗಿದೆ. ನನಗೊಸ್ಕರ ಭಾರತಕ್ಕೆ ಬರುತ್ತಿಲ್ಲ. ಜನರಿಗೆ ನ್ಯಾಯ ಕೊಡಿಸಲು ಬರುತ್ತಿದ್ದೇನೆ.

Comments are closed.