ಬೆಂಗಳೂರು (ಜೂ.9): ಬುಧವಾರ ಸಚಿವ ಸಂಪುಟ ಸಭೆ ನಡೆಯಲಿದ್ದು, ಅದಕ್ಕೂ ಮೊದಲು ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಪದ್ಮನಾಭ ನಗರದ ನಿವಾಸದಲ್ಲಿ ಜೆಡಿಎಸ್ ಹಿರಿಯ ನಾಯಕ ಎಚ್ಡಿ ದೇವೇಗೌಡ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಮಹತ್ವದ ಮಾತುಕತೆ ನಡೆಸಿದ್ದಾರೆ.
ಇಂದಿನ ಸಭೆ ವೇಳೆ ಖಾಲಿ ಇರುವ ಸಚಿವ ಸ್ಥಾನವನ್ನು ಯಾರಿಗೆ ನೀಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಗಿದೆ. ಸದ್ಯ ಜೆಡಿಎಸ್ನಲ್ಲಿ ಎರಡು ಖಾತೆಗಳು ಖಾಲಿ ಇವೆ. ಅದರಲ್ಲಿ ಒಂದು ಸ್ಥಾನವನ್ನು ಈಗಾಗಲೇ ಪಕ್ಷೇತರ ಶಾಸಕರಿಗೆ ಕೊಡಲು ತೀರ್ಮಾನ ಮಾಡಲಾಗಿದೆ. ಇನ್ನುಳಿದ ಒಂದು ಸ್ಥಾನ ಯಾರಿಗೆ ಹಂಚಬೇಕು ಎನ್ನುವದರ ಬಗ್ಗೆ ಚರ್ಚೆ ನಡೆಸಲಾಗಿದೆ.
ಜೆಡಿಎಸ್ನಲ್ಲಿ ಹೆಚ್ಚು ಜನ ಆಕಾಂಕ್ಷಿಗಳು ಇರುವುದು ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ. ಪರಿಷತ್ ಸದಸ್ಯ ಬಿ.ಎಂ. ಫಾರೂಕ್, ಶಾಸಕರಾದ ಎಚ್.ಕೆ. ಕುಮಾರಸ್ವಾಮಿ, ಅನ್ನದಾನಿ, ಸತ್ಯ ನಾರಾಯಣ, ಹೆಚ್.ವಿಶ್ವನಾಥ್ ಸೇರಿ ಸಚಿವ ಸ್ಥಾನ ಆಕಾಂಕ್ಷಿಗಳು. ಇವರಲ್ಲಿ ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬುದು ಜೆಡಿಎಸ್ ನಾಯಕರಿಗೆ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ.
ಸದ್ಯ ಈ ಒಂದು ಸ್ಥಾನಕ್ಕೆ ಅಲ್ಪಸಂಖ್ಯಾತ ಸಮುದಾಯದ ನಾಯಕ ಬಿ ಎಂ ಫಾರೂಕ್ ಹೆಸರು ಪ್ರಬಲವಾಗಿ ಹೆಸರು ಕೇಳಿ ಬರುತ್ತಿದೆ. ಮತ್ತೊಂದೆಡೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ತೊರೆದಿರುವ ವಿಶ್ವನಾಥ್ಗೆ ಸಚಿವ ಸ್ಥಾನ ನೀಡಲೇಬೇಕಾದರ ಅನಿವಾರ್ಯತೆ ತಲೆದೂರಿದೆ. ಹೀಗಾಗಿ ವಿಶ್ವನಾಥ್ಗೆ ಸಚಿವ ಸ್ಥಾನ ನೀಡುವುದಾ ಅಥವಾ ಫಾರೂಕ್ಗೆ ಸಚಿವ ಸ್ಥಾನ ನೀಡಬೇಕಾ ಎಂಬುದರ ಬಗ್ಗೆ ಚರ್ಚೆ ನಡೆಸಲಾಗಿದೆ ಎಂಬುದು ಮೂಲಗಳ ಮಾಹಿತಿ.
Comments are closed.