ಬೆಂಗಳೂರು: ಮೈತ್ರಿ ಸರ್ಕಾರದ ವಿರುದ್ಧ ಮತ್ತೆ ರಾಜೀನಾಮೆ ಅಸ್ತ್ರ ಬಿಟ್ಟಿರುವ ರಮೇಶ್ ಜಾರಕಿಹೊಳಿ ತಮ್ಮ ಈ ನಿರ್ಧಾರಕ್ಕೆ ಪ್ರಚೋದನೆ ನೀಡಿದ್ದು ಸತೀಶ್ ಜಾರಕಿಹೊಳಿ ಎಂದು ತಮ್ಮ ಸಹೋದರನ ವಿರುದ್ಧ ಹರಿಹಾಯ್ದಿದ್ದಾರೆ.
“ಸತೀಶ್ ಜಾರಕಿಹೊಳಿ ಗೋಮುಖ ನೋಡಿ ಮೋಸ ಹೋದೆ. ನನಗೆ ಬಂಡಾಯಕ್ಕೆ ಪ್ರಚೋದನೆ ನೀಡಿದ್ದೇ ಸಚಿವ ಸತೀಶ್. ನಾನು ಸಚಿವನಾಗಿ ಆರಾಮಾಗಿದ್ದೆ. ಆದರೆ ತಮ್ಮ ರಾಜಕೀಯ ಭವಿಷ್ಯದ ದೃಷ್ಟಿಯಿಂದ ನನಗೆ ಪ್ರಚೋದನೆ ಕೊಟ್ಟರು. ಪರಿಸ್ಥಿತಿ ತೋಳ ಬಂತು ತೋಳ ಎಂಬಂತಾಗಿದೆ ನಿಜ,” ಎಂದು ಸಹೋದರನ ವಿರುದ್ಧ ಆರೋಪದ ಸುರಿಮಳೆಗೈದರು.
“ನಾನು ಮಂತ್ರಿಯಾಗಿ ಸಿದ್ದರಾಮಯ್ಯ ಅವರ ಜೊತೆ ಆರಾಮಗೆ ಇದ್ದೆ. ಸತೀಶ್ ನನ್ನ ಮನೆಗೆ ಬಂದು ಕಣ್ಣೀರು ಹಾಕಿ ಮೋಸ ಮಾಡಿದರು ಇವೆಲ್ಲ ಭಿನ್ನಮತಕ್ಕೆ ಸತೀಶ್ ಜಾರಕಿಹೊಳಿ ಕಾರಣ, ಅವತ್ತು ಬಂದು ಕಣ್ಣೀರು ಹಾಕಿದರು. ಬೆಳಗಾವಿ ಸ್ಥಿತಿಗತಿ ನೋಡಿ ಅಂದು ನಾನು ಅವರನ್ನು ಸಿಎಂ ಆಗಬೇಕು ಎಂದು ಹೇಳಿದ್ದೆ. ಆದರೆ ಆತ ಮೋಸಮಾಡಿ ಮಂತ್ರಿಯಾಗಿ ನಿಷ್ಟಾವಂತ ಕಾಂಗ್ರೆಸಿಗ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ನೇರವಾಗಿ ಆರೋಪಿಸಿದರು.
“ಸತೀಶ್ ಹತಾಶ ಭಾವದಿಂದ ಸೋಲು ಒಪ್ಪಿಕೊಂಡಿದ್ದಾರೆ. ಮಧ್ಯಂತರ ಚುನಾವಣೆಗೆ ಮಾತ್ರ ಗೋಕಾಕ್ನಿಂದ ನಿಲ್ಲುತ್ತೇನೆ ಮುಂದಿನ ಚುನಾವಣೆಯಲ್ಲಿ ಗೋಕಾಕ್ ಕ್ಷೇತ್ರವನ್ನು ಲಖನ್ಗೆ ಬಿಟ್ಟುಕೊಟ್ಟು ನಾನು ಯಮಕನಮರಡಿಯಿಂದ ನಿಲ್ಲುತ್ತೇನೆ. ಇಲ್ಲ ಬಳ್ಳಾರಿ, ರಾಯಚೂರುದಲ್ಲಿ ನಿಲ್ಲುತ್ತೇನೆ. ಪ್ರಸ್ತುತ ಈ ಯಮಕನಮರಡಿ ಕ್ಷೇತ್ರವನ್ನು ಸತೀಶ್ ಜಾರಕಿಹೊಳಿ ಪ್ರತಿನಿಧಿಸುತ್ತಿದ್ದಾರೆ
ಈ ಹಿಂದೆಯೇ ನಾನು ರಾಜೀನಾಮೆ ನೀಡಬೇಕು ಎಂದಿದ್ದೆ. ಆದರೆ ಒಬ್ಬನೇ ಯಾಕೆ ನೀಡಲಿ. ತಮ್ಮ ಬೆಂಬಲಿಗರನ್ನು ಜೊತೆಯಲ್ಲಿ ಕರೆದುಕೊಂಡು ಹೋಗೋಣ ಎಂದು ತೀರ್ಮಾನಿಸಿದ್ದೇನೆ. ರಾಜೀನಾಮೆ ಕೊಡೋದಾದರೆ ಒಬ್ಬನೇ ಕೊಡಲ್ಲ. ಹಾಗಾಗಿ ನಮ್ಮ ಬೆಂಬಲಿಗ ಶಾಸಕರೊಂದಿಗೆ ಈ ಕುರಿತು ಚರ್ಚೆ ಮಾಡಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ.ಈ ಬಗ್ಗೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟಪಡಿಸುತ್ತೇನೆ ಎಂದರು.
ರಾಜೀನಾಮೆ ನೀಡುವ ಬಗ್ಗೆ ಈಗಾಗಲೇ ಸ್ಪೀಕರ್ ರಮೇಶ್ ಕುಮಾರ್ ಭೇಟಿಯಾಗಲು ರಮೇಶ್ ಸಮಯ ಕೋರಿದ್ದಾರೆ. ಆದರೆ, ಸ್ಪೀಕರ್ ತಮ್ಮ ಊರಿನಲ್ಲಿರುವುದರಿಂದ ಭೇಟಿ ಅವಧಿ ನಿಗದಿಯಾಗಿಲ್ಲ. ಮೂಲಗಳ ಪ್ರಕಾರ ಅವರಿಗೆ ಶನಿವಾರ ಭೇಟಿಗೆ ಅವಕಾಶ ನೀಡಬಹುದು. ಇನ್ನು ರಾಜೀನಾಮೆ ನೀಡುವ ಬಗ್ಗೆ ಆದಾದ ಬಳಿಕ ಎದುರಾಗುವ ತೊಡಗುಗಳ ಬಗ್ಗೆ ಕಾನೂನಾತ್ಮಕ ಕ್ರಮಗಳ ಬಗ್ಗೆ ವಕೀಲರ ಜತೆಗೆ ಚರ್ಚೆ ನಡೆಸುವುದಕ್ಕೆ ತಿಳಿಸಿದರು.
ಡಿಕೆ ಶಿವಕುಮಾರ್ ನನ್ನ ಲೆವಲ್ ಅಲ್ಲಾ
ಸತೀಶ್ ಹಾಗೂ ರಮೇಶ್ ಜಾರಕಿಹೊಳಿ ನಡುವೆ ಉಂಟಾಗಿರುವ ಭಿನ್ನಮತ ಶಮನ ಮಾಡಲು ಡಿಕೆ ಶಿವಕುಮಾರ್ ಮುಂದಾಗಿದ್ದಾರೆ. ಏನು ತೊಂದರೆಯಾಗಿದೆ ಈ ಬಗ್ಗೆ ನಾನು ಅವರೊಂದಿಗೆ ಮಾತನಾಡಲು ಸಿದ್ದನಿದ್ದೇನೆ ಎಂಬ ಡಿಕೆ ಶಿವಕುಮಾರ್ ಮಾತಿಗೆ ರಮೇಶ್ ಸಿಡಿದೆದ್ದಿದ್ದಾರೆ.
ಈ ಕುರಿತು ಮಾತನಾಡಿದ ಅವರು, ತಮ್ಮ ಮುಂದಿನ ನಿರ್ಧಾರ ಕುರಿತು ಇನ್ನೇನಿದ್ದರೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ ಮಾತನಾಡುತ್ತೇನೆ. ಅವರು ನಮ್ಮ ನಾಯಕರು. ಡಿಕೆ ಶಿವಕುಮಾರ್ ಜೊತೆ ಯಾವುದೇ ಮಾತುಕತೆ ಇಲ್ಲ. ಆತ ನನ್ನ ಲೆವೆಲೆ ಅಲ್ಲ ಎಂದು ಜಲಸಂಪನ್ಮೂಲ ಸಚಿವರ ವಿರುದ್ಧ ಏಕವಚನದಲ್ಲಿ ಹರಿಹಾಯ್ದರು.
ಈ ಹಿಂದೆ ಪಿಎಲ್ಡಿ ಬ್ಯಾಂಕ್ ಚುನಾವಣೆ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ಪರ ಡಿಕೆ ಶಿವಕುಮಾರ್ ನಿಂತಿದ್ದರು. ಅಲ್ಲದೇ ಬೆಳಗಾವಿ ವಿಷಯದಲ್ಲಿ ಅನಗತ್ಯವಾಗಿ ತಲೆಹಾಕುತ್ತಿದ್ದಾರೆ ಎಂದು ನೇರವಾಗಿ ರಮೇಶ್, ಡಿಕೆ ಶಿವಕುಮಾರ್ ವಿರುದ್ಧ ಹರಿಹಾಯ್ದಿದ್ದರು.
ಸತೀಶ್ಗೆ ದೇವರು ಒಳ್ಳೆದು ಮಾಡಲಿ
ಸತೀಶ್ ಜಾರಕಿಹೊಳಿ ಮಂತ್ರಿ ಸ್ಥಾನ ಸಿಗದಿದ್ದಾಗ ಅಮೂಲ್ಯ ವಸ್ತು ಕಳೆದುಕೊಂಡಂತೆ ಹಾಗೇ ಆಡಿದ್ದಾನೆ. ಮಂತ್ರಿ ಸ್ಥಾನ ಸಿಗದಿದ್ದಾಗ ಅವನು ಎಷ್ಟು ಬಾರಿ ನನ್ನ ಮನೆಗೆ ಬಂದಿದ್ದಾನೆ ಎಂಬುದು ಗೊತ್ತಿದೆ. ಏಷ್ಟು ಬಾರಿ ಮೋಸ ಮಾಡಿದ್ದಾನೆ ಎನ್ನುವುದು ಗೊತ್ತಿದೆ. ಅವನಿಗೆ ದೇವರು ಒಳ್ಳೆಯದನ್ನ ಮಾಡಲಿ ಎಂದು ವ್ಯಂಗ್ಯವಾಡಿದರು.