ಕರ್ನಾಟಕ

ಸುಮಲತಾ ಪರ ಚುನಾವಣಾ ಪ್ರಚಾರಕ್ಕೆ ಬಂದ ಕಾರಣ ಹೇಳಿದ ನಟ ಯಶ್

Pinterest LinkedIn Tumblr


ಮಂಡ್ಯ: ನಮ್ಮ ಜೀವನದಲ್ಲಿ ನಾವು ನಡೆದು ಬಂದ ಹಾದಿಯನ್ನು ಯಾವತ್ತು ಮರೆಯಬಾರದು ಎಂದು ನಟ ಯಶ್ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡುವ ಸಂದರ್ಭದಲ್ಲಿ ಹೇಳಿದ್ದಾರೆ.

ಶ್ರೀರಂಗಪಟ್ಟಣದಲ್ಲಿ ಪ್ರಚಾರದ ವೇಳೆ ಮಾತನಾಡಿದ ನಟ ಯಶ್, ಇವತ್ತು ನಮ್ಮ ಜೀವನದಲ್ಲಿ ನಾವು ಏನೇ ಆಗಿದ್ದರು. ನಾವು ನಡೆದು ಬಂದ ಹಾದಿಯನ್ನು ಮರೆಯಬಾರದು. ಯಾರು ನಮ್ಮ ಕಷ್ಟಕಾಲದಲ್ಲಿ ಸಹಾಯ ಮಾಡಿರುತ್ತಾರೆ. ಅಂತಹ ವ್ಯಕ್ತಿಗಳನ್ನು ನೆನಪಿಸಿಕೊಳ್ಳುವುದು ನಿಜವಾದ ವ್ಯಕ್ತಿತ್ವವಾಗಿದೆ. ಅಂಬರೀಶ್ ಅಣ್ಣ ನಮ್ಮ ಜೀವನದಲ್ಲಿ ಬಹಳ ಮುಖ್ಯವಾದ ವ್ಯಕ್ತಿ ಎಂದು ಹೇಳಿದರು.

ನಾನು ಚಿತ್ರರಂಗದ ಫೀಲ್ಡಿಗೆ ಬಂದಾಗ, ನಾವು ಯಾರು ಏನು ಅಲ್ಲ. ಆದರೂ ಅಂಬರೀಶ್ ಅಣ್ಣ ಅದೇ ಗೌರವ ಕೊಟ್ಟು ನಮ್ಮ ಬೆನ್ನು ತಟ್ಟಿದ್ದಾರೆ. ನಮಗೆ ಮಾತ್ರವಲ್ಲಿ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಅದನ್ನು ನೆನಪಿಸಿಕೊಂಡು ನಾನು ಇಂದು ಚುನಾವಣೆ ಪ್ರಚಾರಕ್ಕೆ ಬಂದಿದ್ದೇನೆ ಎಂದರು.

ಸುಮಲತಾ ಅವರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಎಂದು ನನಗೆ ಗೊತ್ತಿದೆ. ಆದರೆ ಇದು ರಾಜಕೀಯವಾಗಿದೆ. ಒಬ್ಬ ಹೆಣ್ಣು ಮಗಳು ಅವರ ಜೀವನದಲ್ಲಿ ತುಂಬಾ ತ್ಯಾಗ ಮಾಡಿರುತ್ತಾರೆ. ಅವರು ಹುಟ್ಟಿದ ಮನೆಯಲ್ಲಿ ಎಲ್ಲ ರೀತಿಯ ಕೆಲಸ, ಸೇವೆ ಮಾಡಿರುತ್ತಾರೆ. ನಂತರ ಮದುವೆಯಾದ ಮೇಲೆ ಪತಿಯ ಮನೆಯಲ್ಲೂ ದುಡಿಯುತ್ತಾರೆ. ಅವರ ಗೌರವವನ್ನು ಕಾಪಾಡಿಕೊಂಡು ಹೋಗುತ್ತಾರೆ. ಆದರೆ ಅಂತವರನ್ನು ಈಗ ಮಂಡ್ಯಕ್ಕೆ ಸೇರದವರಲ್ಲ ಎಂದರೆ ನ್ಯಾಯವೇ ಎಂದು ಯಶ್ ಪ್ರಶ್ನೆ ಮಾಡಿದರು.

ಸುಮಲತಾ ಅವರು ಮಂಡ್ಯ ಸೊಸೆ, ಅಂಬರೀಶ್ ಅವರು ಮಂಡ್ಯದ ಮಗ. ಭಾರತದಲ್ಲಿ ಮಂಡ್ಯ ಎಂದು ಬಂದರೆ ಅಲ್ಲಿ ಅಂಬರೀಶ್ ಹೆಸರು ಬಂದೇ ಬರುತ್ತದೆ. ಮಂಡ್ಯ ಜನತೆಯ ಮೇಲೆ ತುಂಬಾ ಅವರು ತುಂಬಾ ಪ್ರೀತಿ ಇಟ್ಟುಕೊಂಡಿದ್ದರು. ಅದೇ ರೀತಿ ಮಂಡ್ಯದ ಜನರು ಕೂಡ ಅವರ ಮೇಲೆ ಅಭಿಮಾನ ಇಟ್ಟುಕೊಂಡಿದ್ದಾರೆ ಎಂದು ಯಶ್ ಹೇಳಿದರು.

ಇಂದು ಯಾರಾದರೂ ಹೆಣ್ಣು ಮಗಳು ಮುಂದೆ ಹೆಜ್ಜೆಯಿಟ್ಟರೆ ಅವರನ್ನು ಅಲ್ಲೇ ಹೊಸಕಿ ಹಾಕಲು ನೋಡಬಾರದು. ಅವರಿಗೂ ಒಂದು ಅವಕಾಶ ಕೊಡಬೇಕು. ಮಂಡ್ಯ ಜನತೆ ಸಾಕಷ್ಟು ಕೊಡುಗೆ ಮತ್ತು ಮುಖಂಡರನ್ನು ಕೊಟ್ಟಿದ್ದಾರೆ. ಈ ಬಾರಿ ಸುಮಲತಾ ಅವರನ್ನು ಗೆಲ್ಲಿಸುವ ಮೂಲಕ ಇದೊಂದು ಕೊಡುಗೆ ನೀಡಿ. ನೀವು ತುಂಬಾ ಜನರಿಗೆ ಅವಕಾಶ ಕೊಟ್ಟಿದ್ದೀರಿ. ಹೀಗಾಗಿ ಇವರಿಗೂ ಅವಕಾಶ ಕೊಡಿ. ನಂಬರ್ 20 ಕಹಳೆ ಊದುತ್ತಿರುವ ರೈತನ ಗುರುತಿಗೆ ವೋಟ್ ಹಾಕಿ ಎಂದು ಕೈ ಮುಗಿದು ಮತದಾರರ ಬಳಿ ಯಶ್ ಮನವಿ ಮಾಡಿಕೊಂಡರು.

Comments are closed.