ಹುಬ್ಬಳ್ಳಿ: ಅನಂತಕುಮಾರ್ ಹೆಗಡೆ ಅವರ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ಈಗಾಗಲೇ ಅವರಿಗೆ ಸಂಸತ್ನಲ್ಲಿ ತಿಳಿಹೇಳಲಾಗಿದೆ. ಆದರೆ ಅವರು ಇನ್ನೂ ಬುದ್ಧಿ ಕಲಿತಿಲ್ಲ. ಅದು ಅವರ ಕರ್ಮ ಎಂದು ಬಿಜೆಪಿ ಮುಖಂಡ ಬಿ.ಜೆ.ಪುಟ್ಟಸ್ವಾಮಿ ಕೇಂದ್ರ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ‘ಹಿಂದೂ ಹುಡುಗಿಯನ್ನು ಮುಟ್ಟಿದವರ ಕೈ ಕತ್ತರಿಸಿ’ ಎಂಬ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿದರು.
ಎಚ್ಡಿಕೆ ವಿರುದ್ಧ ವಾಗ್ದಾಳಿ:
ಕುಮಾರಸ್ವಾಮಿ ಅಧಿಕಾರಕ್ಕೆ ಬರುವುದಿಲ್ಲ ಎಂಬ ಕಾರಣಕ್ಕೆ ಹಲವು ಆಶ್ವಾಸನೆಗಳನ್ನು ನೀಡಿದ್ದರು. ಆದರೆ ಈಗ ತಾವು ಕೊಟ್ಟ ಆಶ್ವಾಸನೆಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ. ಕೇಂದ್ರ ಸರ್ಕಾರ ಸ್ಮಾರ್ಟ್ ಸಿಟಿಗೆ 1924 ಕೋಟಿ ರೂಪಾಯಿ ಅನುದಾನ ನೀಡಿದೆ. ಆದರೆ ರಾಜ್ಯ ಸರ್ಕಾರ ಕೇವಲ 176 ಕೋಟಿ ಮಾತ್ರ ಖರ್ಚು ನೀಡಿದೆ. ರಾಜ್ಯದ ಆರ್ಥಿಕ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಹೀಗಾಗಿ ಸಿಎಂ ರಾಜೀನಾಮೆ ಕೊಡುವ ಮಾತನಾಡುತ್ತಿದ್ದಾರೆ. ಬಜೆಟ್ಗೂ ಮುನ್ನ ರಾಜೀನಾಮೆ ಕೊಟ್ಟರೂ ಕೊಡಬಹುದು ಎಂದು ವ್ಯಂಗ್ಯ ಮಾಡಿದರು.
ಡಿಸಿಪಿ ದೇವರಾಜ್ ವಿರುದ್ಧ ವಾಗ್ದಾಳಿ:
ಮುಂದುವರೆದು ಮಾತನಾಡಿದ ಅವರು, ಡಿಸಿಪಿ ದೇವರಾಜ್ ವಿರುದ್ಧ ವಾಗ್ದಾಳಿ ನಡೆಸಿದರು. ಕೈಯಲ್ಲಿ ಗನ್ ಇದ್ದಿದ್ದರೆ ಸುಟ್ಟುಬಿಡುವುದಾಗಿ ಡಿಸಿಪಿ ದೇವರಾಜ್ ಶಾಸಕ ಸುರೇಶ್ಗೌಡಗೆ ಧಮ್ಕಿ ಹಾಕಿದ್ದಾರೆ. ಸೀತಾರಾಮ ಕಲ್ಯಾಣ ಸಿನಿಮಾ ವೀಕ್ಷಣೆ ಬಳಿಕ ಈ ಘಟನೆ ನಡೆದಿದೆ. ಮುಖ್ಯಮಂತ್ರಿಗಳು ತಪ್ಪಿತಸ್ಥ ಅಧಿಕಾರಿಯನ್ನು ಶಿಕ್ಷಿಸುವ ಬದಲು ರಾಜಿಮಾಡಲು ಹೊರಟಿದ್ದಾರೆ. ಗೃಹ ಇಲಾಖೆ ಯಾರ ಕೈಯಲ್ಲಿದೆ..? ಶಾಸಕರಿಗಾಗಿ ಪಾರ್ಟಿ ವ್ಯವಸ್ಥೆ ಮಾಡಿದಾಗ ಡಿಸಿಪಿ ಬಂದಿದ್ದು ಯಾಕೆ..? ಎಂದು ತೀವ್ರ ವಾಗ್ದಾಳಿ ನಡೆಸಿದರು.
ಮೋದಿಯೇ ಮುಂದಿನ ಪ್ರಧಾನಿ:
ನರೇಂದ್ರ ಮೋದಿಯವರೇ ಮುಂದಿನ ಪ್ರಧಾನಿ. ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ನರೇಂದ್ರ ಮೋದಿ ಸರ್ಕಾರ ಆರ್ಥಿಕ ಶಿಸ್ತು, ರಕ್ಷಣಾ ವ್ಯವಸ್ಥೆ ಬಲಪಡಿಸಲು ಶ್ರಮಿಸಿದೆ ಎಂದು ಶ್ಲಾಘಿಸಿದರು.
Comments are closed.