ಬೆಂಗಳೂರು: ಕಾಂಗ್ರೆಸ್ನ ಮೂವರು ಶಾಸಕರು ಮುಂಬೈನಲ್ಲಿದ್ದಾರೆ ಎಂಬ ವಿಚಾರವನ್ನು ನಿನ್ನೆ ಸಚಿವ ಡಿ.ಕೆ. ಶಿವಕುಮಾರ್ ಒಪ್ಪಿಕೊಂಡಿದ್ದರು. ಅತ್ತ ಕುಮಾರಸ್ವಾಮಿ ಕೂಡ ಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದರು. ಇಂದು ಆ ವದಂತಿಯನ್ನು ತಳ್ಳಿ ಹಾಕಿದ್ದ ಸಿದ್ದರಾಮಯ್ಯ ಅವರೆಲ್ಲರೂ ಇಲ್ಲೇ ಇದ್ದಾರೆ ಎಂದು ಹೇಳಿದ್ದರು. ಇದರಿಂದಾಗಿ ಕಾಂಗ್ರೆಸ್ನ ಶಾಸಕರಿಗೆ ಬಿಜೆಪಿ ಆಪರೇಷನ್ ನಡೆಸಲು ಗಾಳ ಹಾಕಿದೆಯಾ? ಎಂಬ ಅನುಮಾನಗಳು ಬಲವಾಗುತ್ತಿವೆ.
ಅದಕ್ಕೆ ಪೂರಕವೆಂಬಂತೆ ನಾಳೆ ಸಚಿವ ಡಿ.ಕೆ. ಶಿವಕುಮಾರ್ ಮುಂಬೈಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಕಾಂಗ್ರೆಸ್ನ ಮೂವರು ಶಾಸಕರಾದ ಗೋಕಾಕ್ನ ರಮೇಶ್ ಜಾರಕಿಹೊಳಿ, ಅಥಣಿ ಶಾಸಕ ಮಹೇಶ ಕುಮಟಳ್ಳಿ ಹಾಗೂ ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ ಮುಂಬೈನಲ್ಲಿದ್ದಾರೆ ಎಂಬ ಬಗ್ಗೆ ಖುದ್ದು ಕಾಂಗ್ರೆಸ್ ನಾಯಕರೇ ಒಪ್ಪಿಕೊಂಡಿದ್ದಾರೆ. ಹೀಗಾಗಿ, ಅವರು ಬಿಜೆಪಿಯತ್ತ ವಾಲುವ ಮುನ್ನ ಮನವೊಲಿಸಿ ಕರೆದುಕೊಂಡು ಬರಲು ಡಿಕೆಶಿ ಹೋಗುತ್ತಿದ್ದಾರೆ ಎಂಬ ಬಗ್ಗೆಯೂ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ, ಸದ್ಯಕ್ಕೆ ಡಿ.ಕೆ. ಶಿವಕುಮಾರ್ ನಡೆ ಭಾರೀ ಕುತೂಹಲ ಮೂಡಿಸಿದೆ.
ಮುಂಬೈನಲ್ಲಿರುವ ಮೂವರು ಶಾಸಕರು ಎಲ್ಲಿ ಉಳಿದುಕೊಂಡಿದ್ದಾರೆ ಎಂಬ ಮಾಹಿತಿಯೂ ನನಗಿದೆ ಎಂದು ಹೇಳಿದ್ದ ಡಿ.ಕೆ. ಶಿವಕುಮಾರ್ ಆ ಮೂವರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಹೀಗಾಗಿ, ನಾಳೆ ಮುಂಬೈಗೆ ತೆರಳಿ ಅತೃಪ್ತರನ್ನು ಭೇಟಿ ಮಾಡಿ ಕಾಂಗ್ರೆಸ್ ಪಕ್ಷದಲ್ಲಿಯೇ ಮುಂದುವರಿಯುವಂತೆ ಮನವೊಲಿಸುವ ಸಾಧ್ಯತೆ ಇದೆ. ಈ ಹಿಂದೆ ಮೈತ್ರಿ ಸರ್ಕಾರ ರಚನೆಯ ಸಂದರ್ಭದಲ್ಲಿ ಕೂಡ ಕಾಂಗ್ರೆಸ್ ಶಾಸಕರನ್ನು ಆಪರೇಷನ್ ಕಮಲದಿಂದ ಕಾಪಾಡಿಕೊಳ್ಳಲು ಡಿ.ಕೆ. ಶಿವಕುಮಾರ್ ಈಗಲ್ಟನ್ ರೆಸಾರ್ಟ್ ಮತ್ತು ತೆಲಂಗಾಣಕ್ಕೆ ಕರೆದುಕೊಂಡು ಹೋಗಿ ಪೂರ್ಣ ಭದ್ರತೆಯನ್ನು ಒದಗಿಸಿದ್ದರು. ಬಳಿಕ, ರೆಸಾರ್ಟ್ನಿಂದಲೇ ವಿಧಾನಸೌಧಕ್ಕೆ ಕರೆದುಕೊಂಡುಬಂದಿದ್ದರು.
ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಿ.ಕೆ. ಶಿವಕುಮಾರ್ ಅವರ ಹೆಗಲಿಗೆ ಮತ್ತೊಮ್ಮೆ ಅತೃಪ್ತರ ಮನವೊಲಿಕೆ ಮಾಡುವ ಜವಾಬ್ದಾರಿಯನ್ನು ಕಾಂಗ್ರೆಸ್ ಹೈಕಮಾಂಡ್ ನೀಡಿದೆ ಎನ್ನಲಾಗಿದೆ. ಜಲಸಂಪನ್ಮೂಲ ಇಲಾಖೆಯ ಅಧಿಕೃತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಡಿಕೆಶಿ ತೆರಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಅಧಿಕೃತ ಕಾರ್ಯಕ್ರಮದ ಜೊತೆಗೆ ಆಪರೇಷನ್ ಕಮಲವನ್ನು ವಿಫಲಗೊಳಿಸಲು ಹೈಕಮಾಂಡ್ ಡಿ.ಕೆ. ಶಿವಕುಮಾರ್ ಅವರಿಗೆ ಜವಾಬ್ದಾರಿ ನೀಡಿದೆ ಎಂದು ಮೂಲಗಳು ತಿಳಿಸಿವೆ.
Comments are closed.