ಕರ್ನಾಟಕ

ಪೊಲೀಸ್‌ ಆಗಲು ಹೊರಟ ವಿದ್ಯಾರ್ಥಿಗಳು ಜೈಲುಪಾಲು

Pinterest LinkedIn Tumblr


ಬೆಂಗಳೂರು: ಸಿವಿಲ್‌ ಪೊಲೀಸ್‌ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಸಂಚಿನಲ್ಲಿ ಭಾಗಿ ಆಗಿರುವ ಆರೋಪದ ಮೇಲೆ 110 ಪರೀಕ್ಷಾರ್ಥಿ ವಿದ್ಯಾರ್ಥಿಗಳು ಜೈಲು ಸೇರಿದ್ದಾರೆ. ಉಳಿದ 9 ಮಂದಿಯನ್ನು ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯ ಸಿಸಿಬಿ ಕಸ್ಟಡಿಗೆ ಒಪ್ಪಿಸಿದೆ. ಇವರೆಲ್ಲರೂ ನಾನಾ ಕಾಲೇಜುಗಳಲ್ಲಿ ಓದುತ್ತಿರುವವರಾಗಿದ್ದಾರೆ ಎಂದು ತಿಳಿದು ಬಂದಿದೆ.

ನ.24ರಂದು ಸಿಸಿಬಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು 119 ಮಂದಿಯನ್ನು ಬಂಧಿಸಲಾಗಿತ್ತು. ಇವರಲ್ಲಿ ಪ್ರಮುಖ ಆರೋಪಿ ಶಿವಕುಮಾರ ಸ್ವಾಮಿ ಹಾಗೂ ಎಂಟು ವಿದ್ಯಾರ್ಥಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ತನಿಖಾಧಿಕಾರಿ ವೇಣುಗೋಪಾಲ್‌ ಅವರು ವಶಕ್ಕೆ ಪಡೆದಿದ್ದಾರೆ. ಜೈಲು ಸೇರಿರುವವರಲ್ಲಿ ಐವರು ವಿದ್ಯಾರ್ಥಿನಿಯರೂ ಸೇರಿದ್ದಾರೆ.

ಸಿದ್ದರಾಮಯ್ಯ ಸರಕಾರ ಜಾರಿಗೆ ತಂದಿದ್ದ ಹೊಸ ನಿಯಮದ ಪ್ರಕಾರ, ಸೋರಿಕೆ ಆದ ಪ್ರಶ್ನೆಪತ್ರಿಕೆಗಳನ್ನು ಖರೀದಿಸುವುದೂ ಅಪರಾಧ. ಈ ಹಿನ್ನೆಲೆಯಲ್ಲಿ ಬಂಧಿತರಾದ ಎಲ್ಲಾ ವಿದ್ಯಾರ್ಥಿಗಳನ್ನೂ ಅಧಿಕಾರಿಗಳ ತಂಡ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ನ್ಯಾಯಾಲಯ 110 ಮಂದಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದು, ಉಳಿದ 9 ಮಂದಿಯನ್ನು ಸಿಸಿಬಿ ಕಸ್ಟಡಿಗೆ ಒಪ್ಪಿಸಿದೆ.

ಪತ್ತೆಯಾಗದ ಬಸವರಾಜ್‌
ಪ್ರಕರಣದ ಮತ್ತೊಬ್ಬ ಆರೋಪಿ ಬಸವರಾಜ್‌ ಇದುವರೆಗೂ ತಲೆಮರೆಸಿಕೊಂಡಿದ್ದು ತುಮಕೂರಿನ ಈತನ ಮನೆಗೆ ಬೀಗ ಬಿದ್ದಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಜಾಲದ ಪ್ರಮುಖ ಆರೋಪಿ ಈತನೇ ಎನ್ನುವ ಸುಳಿವು ಅಧಿಕಾರಿಗಳಿಗೆ ಸಿಕ್ಕಿದೆ. ಈತನೇ ಸೋರಿಕೆ ಆದ ಪ್ರಶ್ನೆ ಪತ್ರಿಕೆಯನ್ನು 3 ಸಾವಿರ ಪುಟಗಳಷ್ಟು ಜೆರಾಕ್ಸ್‌ ಮಾಡಿಸಿಕೊಂಡು ತುಮಕೂರಿನಿಂದ ಆರೋಪಿಗಳು ಬಂಧಿತರಾದ ಶ್ರವಣಬೆಳಗೊಳ ಸಮೀಪದ ಕಲ್ಮಠ ಶಾಲೆಗೆ ತಂದಿದ್ದ. ಕಾರ್ಯಾಚರಣೆ ವೇಳೆ ಸ್ವಲ್ಪದರಲ್ಲಿ ಆತ ತಪ್ಪಿಸಿಕೊಂಡಿದ್ದಾನೆ. ಉಳಿದೆಲ್ಲಾ ಆರೋಪಿಗಳು ಒಂದೇ ಜಾಗದಲ್ಲಿ ಇದ್ದರೆ ಈತ ಮಾತ್ರ ಬೇರೆ ಜಾಗದಲ್ಲಿದ್ದ. ಹೀಗಾಗಿ ಆತ ತಪ್ಪಿಸಿಕೊಳ್ಳಲು ಸಾಧ್ಯವಾಗಿದೆ. ಈತನ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಪರಾಧ ವಿಭಾಗದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಯುವತಿಯರ ಅಳು

ಬಂಧಿತ 119 ಆರೋಪಿಗಳಲ್ಲಿ 5 ಮಂದಿ ಮಹಿಳಾ ಪರೀಕ್ಷಾರ್ಥಿಗಳೂ ಇದ್ದಾರೆ. ಇವರನ್ನು ಸಿಸಿಬಿ ಅಧಿಕಾರಿಗಳು ಪ್ರಾಥಮಿಕ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಿಸಲು ಹೋದರೆ ಇವರು ಅಳಲು ಶುರು ಮಾಡುತ್ತಾರೆ. ಈ ಹೆಣ್ಣು ಮಕ್ಕಳಿಗೆ ಜಾಲದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಸಹ ಪರೀಕ್ಷಾರ್ಥಿಗಳು ಇವರನ್ನು ಪುಸಲಾಯಿಸಿ ಕರೆದುಕೊಂಡು ಹೋಗಿರುವುದು ತನಿಖೆ ವೇಳೆ ಗೊತ್ತಾಗಿದ್ದರಿಂದ ಅವರನ್ನು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯದೆ ನೇರವಾಗಿ ನ್ಯಾಯಾಲಯದ ಸೂಚನೆಯಂತೆ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದೇವೆ. ಶನಿವಾರ ಮತ್ತು ಭಾನುವಾರ ನಟ ಅಂಬರೀಶ್‌ ಅವರ ಅಂತಿಮ ಯಾತ್ರೆ ಬಂದೋಬಸ್ತ್‌ನಲ್ಲಿ ತೊಡಗಿಸಿಕೊಂಡಿದ್ದರಿಂದ ಸಿಸಿಬಿ ಕಸ್ಟಡಿಯಲ್ಲಿ ಇರುವ ಆರೋಪಿಗಳ ಪೂರ್ಣ ವಿಚಾರಣೆ ನಡೆಸುವುದು ಸಾಧ್ಯವಾಗಿಲ್ಲ. ಮಂಗಳವಾರದಿಂದ ವಿಚಾರಣೆ ಕಾರ್ಯ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Comments are closed.