ಕರ್ನಾಟಕ

ಹಸಿವೆನಿಂದ ಬಳಲಿ, ರೈಲು ನಿಲ್ಲಿಸಿ ಅಡುಗೆ ಮಾಡಿದ 1500 ಸೈನಿಕರು

Pinterest LinkedIn Tumblr


ಫರಿದಾಬಾದ್: ಹಸಿವೆಯಿಂದ ಕಂಗಾಲಾಗಿದ್ದ ಸೈನಿಕರು ರೈಲನ್ನು ನಿಲ್ಲಿಸಿ ಅಡುಗೆ ಮಾಡಿ ಊಟ ಮಾಡಿದ ಘಟನೆ ಫರಿದಾಬಾದ್‌ನಲ್ಲಿ ನಡೆದಿದೆ.

ಜಮ್ಮು ಮತ್ತು ಕಾಶ್ಮೀರದಿಂದ ಸೋಮವಾರ ಆರಂಭವಾಗಿದ್ದ ಆ 1,500 ಸೈನಿಕರ ರೈಲು ಪ್ರಯಾಣ ರಾಯ್ಪುರದ ಕಡೆಗೆ ಸಾಗಿತ್ತು. 19 ತಾಸುಗಳ ಪ್ರಯಾಣದ ಮಧ್ಯೆ ಅವರಿಗೆ ತಿನ್ನಲು ಏನೂ ಸಿಗಲಿಲ್ಲ. ಹಸಿವಿಂದ ಕಂಗಾಲಾದ ಅವರು ಬೇರೆ ದಾರಿ ಕಾಣದೆ ರೈಲನ್ನೇ ನಿಲ್ಲಿಸಿ ಅಡುಗೆ ಮಾಡಲು ನಿರ್ಧರಿಸಿ ಚೈನ್ ಎಳೆದೇ ಬಿಟ್ಟರು. ಆದರ ಲೋಕೋ ಪೈಲೆಟ್ (ರೈಲು ಚಾಲಕ) ರೈಲು ನಿಲ್ಲಿಸಲು ಒಪ್ಪಲಿಲ್ಲ. ಆದರೆ ಸೈನಿಕರು ಮಾತ್ರ ರೈಲು ಮುಂದೆ ಸಾಗಲು ಬಿಡಲೇ ಇಲ್ಲ.

ರೈಲು ನಿಲ್ಲಿಸಿ ಅಡುಗೆ

ಫರಿದಾಬಾದ್ ನಿಲ್ದಾಣದಲ್ಲಿ ರೈಲನ್ನು ಕೆಲ ಕಾಲ ನಿಲ್ಲಿಸಿಕೊಂಡಿರಲು ಅನುಮತಿ ನೀಡುವಂತೆ ಸ್ಟೇಷನ್ ಮಾಸ್ಟರ್ ಬಳಿ ವಿನಂತಿಸಿಕೊಂಡರು. ಹಸಿವೆಯಿಂದ ತಾವು ಪರದಾಡುತ್ತಿರುವುದನ್ನು ಆರ್‌ಪಿಎಫ್, ಜಿಆರ್‌ಎಫ್ ಮತ್ತು ರೈಲ್ವೆ ಅಧಿಕಾರಿಗಳಿಗೆ ವಿವರಿಸಿದರು.

ಸೋಮವಾರ 8.30ಕ್ಕೆ ಜಮ್ಮುವಿನಲ್ಲಿ ತಿಂಡಿ ತಿಂದು ಸೈನಿಕರು ಪ್ರಯಾಣ ಆರಂಭಿಸಿದ್ದರು. ವಿಶೇಷ ರೈಲಿನಲ್ಲಿ ರಾಯ್ಪುರಕ್ಕೆ ಹೋಗುವುದೆಂದು ಅವರ ಮೇಲಾಧಿಕಾರಿಗಳು ಹೇಳಿದ್ದರು. ದಾರಿಯುದ್ದಕ್ಕೂ ತಿನ್ನಲು ಏನು ಸಿಗುವುದಿಲ್ಲ. ಹೀಗಾಗಿ ಗ್ಯಾಸ್ ಒಲೆ, ಪಾತ್ರೆ, ಕಾಯಿಪಲ್ಲೆ ಸೇರಿದಂತೆ ಅಡುಗೆಗೆ ಬೇಕಾದ ಸಾಮಗ್ರಿಗಳನ್ನು ಇಟ್ಟುಕೊಳ್ಳುವಂತೆ ಸೂಚನೆ ನೀಡಲಾಗಿತ್ತು. 19 ಗಂಟೆಗಳ ಪ್ರಯಾಣದಲ್ಲಿ ತಿನ್ನಲು ಏನೂ ಸಿಗದೆ, ಅಡುಗೆ ಮಾಡಿಕೊಳ್ಳಲು ಅವಕಾಶ ಸಿಗದೆ ಸೈನಿಕರು ಪರದಾಡಿದ್ದಾರೆ. ಕೊನೆಗೆ ರೈಲು ಫರಿದಾಬಾದ್ ಬಳಿ ಬರುತ್ತಿದ್ದಂತೆ ರೈಲಿನ ಚೈನನ್ನು ಎಳೆದಿದ್ದಾರೆ.

ರೈಲು ನಿಲುಗಡೆಗೆ ಅನುಮತಿ ಇಲ್ಲ ಎಂದಿದ್ದ ಸ್ಟೇಷನ್ ಮಾಸ್ಟರ್ , ಸೈನಿಕರ ಪರಿಸ್ಥಿತಿ ನೋಡಲಾಗದೆ ಕೊನೆಗೂ ಒಪ್ಪಿಗೆ ನೀಡಿದ್ದಾರೆ. ತಕ್ಷಣ ಹತ್ತಿರದ ಮಾರುಕಟ್ಟೆಗೆ ಹೋದ ಸೈನಿಕರು ಬೇಕಾದ ಸಾಮಾನು ಖರೀದಿಸಿ ಅಡುಗೆ ಮಾಡಿದ್ದಾರೆ. ಸ್ಥಳೀಯರು ಸಹ ಕಡಿಮೆ ಹಣಕ್ಕೆ ಅವರಿಗೆ ಬೇಕಾದ ಸಾಮಾನು ಕೊಟ್ಟು ಸಹಕರಿಸಿದ್ದಾರೆ.

ಪ್ಲಾಟ್‌ಫಾರ್ಮ್ ನಂಬರ್ 1 ರಲ್ಲಿ ಕುಳಿತು ಪುರಿ-ಪಲ್ಯ, ಚಪಾತಿ ಮಾಡಿ ತಿಂದು ಹಸಿವನ್ನು ನೀಗಿಸಿಕೊಂಡಿದ್ದಾರೆ.

ಸ್ಥಳೀಯ ಪೊಲೀಸರು ಸೈನಿಕರಿಗೆ ಅಗತ್ಯ ನೀರು ಪೂರೈಕೆ ಮಾಡುವ ಮೂಲಕ ಹೃದಯವಂತಿಕೆ ಮೆರೆದರು.

Comments are closed.