ಕರ್ನಾಟಕ

ಕೊಡಗಿನ ಸೋಮವಾರಪೇಟೆ ತಾಲೂಕಿನಲ್ಲಿ ಮುಂದುವರಿದ ಅಲ್ಲಲ್ಲಿ ಭೂಕುಸಿತ

Pinterest LinkedIn Tumblr


ಸೋಮವಾರಪೇಟೆ: ತಾಲೂಕಿನಾದ್ಯಂತ ಮಳೆ ಸುರಿಯುತ್ತಿದ್ದು, ಅಲ್ಲಲ್ಲಿ ಭೂಕುಸಿತ ಮುಂದುವರಿದಿದೆ. ಇದರಿಂದ ಭೀತಿಗೊಂಡ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ.

ಕಿರಗಂದೂರು ಸಮೀಪದ ಮಕ್ಕಳಗುಡಿ ಬೆಟ್ಟದಲ್ಲಿ ಮೂರು ದಿನಗಳಿಂದ ಭೂಮಿ ಜಾರುತ್ತಿದೆ. ಬೆಟ್ಟದಿಂದ ಜಾರಿದ ಮಣ್ಣು, ಕಲ್ಲು ಹಾಗೂ ಭಾರಿ ಗಾತ್ರದ ಮರಗಳು ಐಗೂರು, ಕಿರಗಂದೂರು ಸಂಪರ್ಕ ರಸ್ತೆಯಲ್ಲಿ ಶೇಖರಣೆಗೊಂಡಿವೆ. ಅಲ್ಲಿನ ನಿವಾಸಿಗಳು ಮನೆ ಖಾಲಿ ಮಾಡಿ ತೆರಳಿದ್ದಾರೆ. ಮಳೆ ಸುರಿಯುತ್ತಿರುವುದರಿಂದ ಮತ್ತೊಮ್ಮೆ ದೊಡ್ಡ ಮಟ್ಟದ ಭೂಕುಸಿತ ಸಂಭವಿಸಬಹುದು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ನಿಲ್ಲಿಸಿದ ಶಾಲಾ ವಾಹನವನ್ನು ಹೊರತೆಗೆಯಲು ಗ್ರಾಮದ ಯುವಕರು ಶ್ರಮಪಟ್ಟರು.

ಭೂಕುಸಿತದಿಂದ ಆಸ್ತಿಪಾಸ್ತಿ ಕಳೆದುಕೊಂಡ ಕಿರಗಂದೂರು ಗ್ರಾಮದ ಕೆ.ಟಿ.ಲಿಂಗರಾಜು, ಸಿಂಗೂರು ಅಪ್ಪಯ್ಯ, ಕೆ.ಪಿ.ರೋಶನ್‌ ತಮ್ಮ ನೋವು ತೋಡಿಕೊಂಡರು.

ತಾಕೇರಿ ಗ್ರಾಮದಲ್ಲಿ ಭೂಮಿ ಬಿರುಕು ಹೆಚ್ಚಾಗುತ್ತಿದ್ದು, ಗ್ರಾಮದ ಹೆಚ್ಚಿನ ಜನರು ಭಾನುವಾರದಂದು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿರುವುದು ಕಂಡು ಬಂತು. ಗ್ರಾಮದ ಸುರೇಂದ್ರ ಎಂಬುವವರ ಮನೆಯ ಹಿಂಭಾಗ ಭಾನುವಾರ ಮತ್ತೊಮ್ಮೆ ಭೂಕುಸಿತ ಸಂಭವಿಸಿದೆ. 2006ರ ಜುಲೈ 26ರಂದು ಭೂಕುಸಿತ ಸಂಭವಿಸಿದ ಬಿಳಿಗೇರಿ ರಾಜಂಡಬಾಣೆಯಲ್ಲಿ ಮತ್ತೊಮ್ಮೆ ಭೂಮಿ ಬಿರುಕು ಬಿಟ್ಟಿದ್ದು, ಬಾಚಿನಾಡಂಡ ಚಿಟ್ಟಿಯಪ್ಪ ಅವರ ಮನೆ ಜರುಗುತ್ತಿದೆ. ಮೋಹನ್‌ ಬೋಪಣ್ಣ ಅವರ ಕೆರೆ ಒಡೆದಿದ್ದು, ಪಲ್ಪರ್‌ಹೌಸ್‌ ಕುಸಿದಿದೆ. ಈಗಾಗಲೆ ನಾಲ್ಕು ಕುಟುಂಬಗಳು ಬೇರೆಡೆಗೆ ಸ್ಥಳಾಂತರಗೊಂಡಿವೆ.

ತಾಲೂಕಿನ ಮುಕ್ಕೊಡ್ಲು ಹಚ್ಚಿನಾಡು ಗ್ರಾಮಗಳಲ್ಲಿ ಸಿಲುಕಿಗೊಂಡಿದ್ದ ಪುರುಷರು, ಮಹಿಳೆಯರು, ಮಕ್ಕಳು ಹಾಗೂ ವೃದ್ಧರೂ ಸೇರಿದಂತೆ 60 ಮಂದಿಯನ್ನು ಬೆಂಗಳೂರಿನ ಅಗ್ನಿಶಾಮಕದಳದ ಸಿಬ್ಬಂದಿ ರಕ್ಷಿಸಿ, ಮಾದಾಪುರ ಗಂಜಿಕೇಂದ್ರಕ್ಕೆ ಕರೆ ತಂದಿದ್ದಾರೆ. ಭಾನುವಾರ ಬೆಳಗ್ಗೆ ಶಾಸಕ ಅಪ್ಪಚ್ಚು ರಂಜನ್‌, ಅಗ್ನಿಶಾಮಕ ದಳದ ಮಹಾನಿರ್ದೇಶಕ ಎಂ.ಎನ್‌.ರೆಡ್ಡಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಮೂರು ಕಿ.ಮೀ. ಕಾಲ್ನಡಿಗೆಯಲ್ಲೇ ತೆರಳಿ, ಇಗ್ಗೊಡ್ಲು ಗ್ರಾಮದ ಮೂಲಕ ಕರೆತರಲಾಗಿದೆ. ವಿಧಾನಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ ಮಾದಾಪುರ ಗಂಜಿಕೇಂದ್ರದಲ್ಲಿ ಮೊಕ್ಕಾಂ ಹೂಡಿದ್ದಾರೆ.

Comments are closed.