ಕರ್ನಾಟಕ

ಹುಬ್ಬಳ್ಳಿ: ಏಷ್ಯಾದ ಮೊದಲ ಕೋರ್ಟ್‌ ಸಂಕೀರ್ಣ ಅನಾವರಣ

Pinterest LinkedIn Tumblr


ಹುಬ್ಬಳ್ಳಿ: ಏಷ್ಯಾದಲ್ಲೇ ಮಾದರಿ ತಾಲೂಕು ನ್ಯಾಯಾಲಯಗಳ ಸಂಕೀರ್ಣ ಭಾನುವಾರ ಲೋಕಾರ್ಪಣೆಗೊಳ್ಳಲಿದೆ. ವಿವಿಧ ನಾವೀನ್ಯತೆ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆ ಹೊಂದಿರುವ ಕೋರ್ಟ್‌ ಸಂಕೀರ್ಣವನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾ. ದೀಪಕ್‌ ಮಿಶ್ರಾ ಅನಾವರಣಗೊಳಿಸಲಿದ್ದಾರೆ. 122 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಸಂಪೂರ್ಣ ಕೇಂದ್ರೀಕೃತ ಹವಾನಿಯಂತ್ರಿತ ವ್ಯವಸ್ಥೆ ಹೊಂದಿದೆ.

ಏಷ್ಯಾದಲ್ಲೇ ಮೊದಲ ಸುಸಜ್ಜಿತ ಸಂಕೀರ್ಣ
5.15 ಎಕರೆ ಜಾಗದಲ್ಲಿ ಸಂಕೀರ್ಣ ತಲೆ ಎತ್ತಿದ್ದ, 24525 ಚದರ ಮೀಟರ್‌ ವಿಸ್ತೀರ್ಣದಲ್ಲಿ ಬಿ+ಜಿ+5 ಅಂತಸ್ತು ಮಾದರಿಯಲ್ಲಿ ನಿರ್ಮಾಣಗೊಂಡಿದೆ. ಕಾಮಗಾರಿಯನ್ನು ಹೈದರಾಬಾದ್‌ನ ಕೆಎಂವಿ ಪ್ರೊಜೆಕ್ಟ್ ಸಂಸ್ಥೆ ಕೈಗೊಂಡಿದೆ. ಸಂಪೂರ್ಣ ಕೇಂದ್ರೀಕೃತ ಹವಾನಿಯಂತ್ರಿತ ವ್ಯವಸ್ಥೆ ಇದೆ. ಇಂತಹ ಸೌಕರ್ಯ ಹೊಂದಿರುವ ತಾಲೂಕು ನ್ಯಾಯಾಲಯ ಕಟ್ಟಡ ಭಾರತ ಮಾತ್ರವಲ್ಲದೆ ಏಷ್ಯಾದಲ್ಲಿಯೇ ಮೊದಲನೆಯದ್ದು ಎನ್ನಲಾಗಿದೆ.

ವಿಡಿಯೋ ಕಾನ್‌#ರೆನ್ಸ್‌ ವ್ಯವಸ್ಥೆ
ನೂತನ ನ್ಯಾಯಾಲಯಗಳ ಸಂಕೀರ್ಣದಲ್ಲಿನ ಹಾಲ್‌ಗ‌ಳು ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ಗಳಲ್ಲಿನ ನ್ಯಾಯಾಧೀಶರ ಕೊಠಡಿ ಹಾಗೂ ಹಾಲ್‌ಗ‌ಳಿಗಿಂತ ವಿಶಾಲವಾಗಿವೆ. ಭದ್ರತಾ ದೃಷ್ಟಿಯಿಂದ ನ್ಯಾಯಾಲಯದ ಸಂಕೀರ್ಣದ ಒಳ ಮತ್ತು ಹೊರ ಭಾಗದಲ್ಲಿ ಸಿಸಿಟಿವಿ, ಅಸೆಸ್‌ ಕಂಟ್ರೋಲ್‌ ಸಿಸ್ಟಮ್‌ ಅಳವಡಿಸಲಾಗಿದೆ. ನ್ಯಾಯಾಧೀಶರು ಅಗತ್ಯವಿರುವ ಪ್ರಕರಣಗಳ ವಿಚಾರಣೆಗೆ ವಿಡಿಯೋ ಕಾನ್‌#ರೆನ್ಸ್‌ ವ್ಯವಸ್ಥೆ ಹೊಂದಿದೆ.

ನೀರು ಮರು ಬಳಕೆಗೆ ಆದ್ಯತೆ
ಕಟ್ಟಡ ನಿರ್ವಹಣೆ ವ್ಯವಸ್ಥೆ (ಬಿಎಂಎಸ್‌) ಇದೆ. ಹೀಟಿಂಗ್‌ ವೆಂಟಿಲೇಶನ್‌ ಏಸ್‌ ಕಂಡೀಷನಿಂಗ್‌ ಸಿಸ್ಟಮ್‌ (ಎಚ್‌ವಿಎಸಿ), ಸಿಂಕ್ರೊನೈಸಿಂಗ್‌ ವ್ಯವಸ್ಥೆಯುಳ್ಳ 1000 ಕೆವಿಎ, 750 ಕೆವಿಎ, 500 ಕೆವಿಎಯ ಡೀಸೆಲ್‌ ಜನರೇಟರ್‌ ಸೆಟ್ಸ್‌, ವಿದ್ಯುತ್‌ ಅಡಚಣೆಯಾಗದಂತೆ 160 ಕೆವಿಎ ಸಾಮರ್ಥ್ಯದ ಯುಪಿಎಸ್‌ ವ್ಯವಸ್ಥೆ, ನೀರು ಮರುಬಳಕೆ ಮಾಡಲು 0.1 ಎಂಎಲ್‌ಡಿ ಸಾಮರ್ಥ್ಯದ ತ್ಯಾಜ್ಯನೀರು ಸಂಸ್ಕರಣ ಘಟಕ, ಮಳೆ ನೀರು ಕೊಯ್ಲು ವ್ಯವಸ್ಥೆ ಕಲ್ಪಿಸಲಾಗಿದೆ.

ಭೂಕಂಪವಾದರೂ ಬೀಳಲ್ಲ!
ಕಟ್ಟಡ ಭೂಕಂಪ ನಿರೋಧಕ ಶಕ್ತಿ ಹೊಂದಿದ್ದು, ಭೂಮಿ ಕಂಪನದ ಮುನ್ಸೂಚನೆ ತಿಳಿಸುವ ಅತ್ಯಾಧುನಿಕ ವ್ಯವಸ್ಥೆ ಅಳವಡಿಸಲಾಗಿದೆ. ಸಂಕೀರ್ಣದ ಯಾವುದೇ ಭಾಗದಲ್ಲೂ ಹೊಗೆ ಕಾಣಿಸಿಕೊಂಡರೆ ತಕ್ಷಣವೇ ಮುನ್ಸೂಚನೆ ನೀಡುವ ವ್ಯವಸ್ಥೆ ಇದೆ. ಯಾವುದೇ ಭಾಗದಲ್ಲಿ ಹೊಗೆ ಕಾಣಿಸಿಕೊಂಡರೆ ಕಟ್ಟಡದ ಎಲ್ಲ ಅಂತಸ್ತುಗಳಲ್ಲಿನ ಫೈರ್‌ವಾಟರ್‌ಗಳು ಆಟೋಮ್ಯಾಟಿಕ್‌ ಆಗಿ ಕಾರ್ಯನಿರ್ವಹಿಸಿ ಬೆಂಕಿ ನಂದಿಸಲಿವೆ.

20 ನ್ಯಾಯಾಲಯಗಳು
ಕಟ್ಟಡದ ಬೇಸ್‌ಮೆಂಟ್‌ ಹಾಗೂ ನೆಲಮಹಡಿ ಕಟ್ಟಡವನ್ನು ವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಮೊದಲ ಮಹಡಿಯಲ್ಲಿ ಮೂರು ನ್ಯಾಯಾಲಯಗಳು, ಒಂದು ಕಾನ್ಫರೆನ್ಸ್‌ ಹಾಲ್‌ ಹಾಗೂ ಇನ್ನುಳಿದ ನಾಲ್ಕು ಮಹಡಿಗಳಲ್ಲಿ ತಲಾ ನಾಲ್ಕು ನ್ಯಾಯಾಲಯಗಳಿವೆ. ಇದರಲ್ಲಿ ಒಂದು ಕೌಟುಂಬಿಕ ನ್ಯಾಯಾಲಯ, 2 ಜಿಲ್ಲಾ ನ್ಯಾಯಾಲಯ, 2 ಕಾರ್ಮಿಕ ನ್ಯಾಯಾಲಯ (ಕೈಗಾರಿಕೆ ಮತ್ತು ಕಾರ್ಮಿಕ), 4 ಸಿವಿಲ್‌ ಜ್ಯೂನಿಯರ್‌ ಡಿವಿಜನ್‌, 2 ಜೆಎಂಎಫ್‌ಸಿ, ಮೂರು ಸಿನಿಯರ್‌ ಡಿವಿಜನ್‌ ಕೋರ್ಟ್‌ಗಳಿವೆ. ಸದ್ಯ ಈ ಸಂಕೀರ್ಣದಲ್ಲಿ 17 ಕೋರ್ಟ್‌ಗಳು ಕಾರ್ಯನಿರ್ವಹಿಸಲಿವೆ, ಒಂದು ಕಾನ್‌#ರೆನ್ಸ್‌ ಹಾಲ್‌ ಹಾಗೂ 2 ಕೋರ್ಟ್‌ಗಳಲ್ಲಿ ಬಾರ್‌ ಅಸೋಸಿಯೇಶನ್‌, ಲೈಬ್ರರಿ, ಮಹಿಳಾ ವಕೀಲರ ಕೊಠಡಿಗಳು ಇರಲಿವೆ.

ಗಣ್ಯರ ಉಪಸ್ಥಿತಿ
ನೂತನ ನ್ಯಾಯಾಲಯಗಳ ಸಂಕೀರ್ಣವನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ ಮಿಶ್ರಾ ಉದ್ಘಾಟಿಸಲಿದ್ದಾರೆ. ಸಿಎಂ ಕುಮಾರಸ್ವಾಮಿ ಪಾಲ್ಗೊಳ್ಳಲಿದ್ದಾರೆ. ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಮೋಹನ ಎಂ. ಶಾಂತನಗೌಡರ, ಎಸ್‌. ಅಬ್ದುಲ್‌ ನಜೀರ ಗೌರವಾನ್ವಿತ ಅತಿಥಿಗಳಾಗಿ ಆಗಮಿಸಲಿದ್ದಾರೆ. ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದಿನೇಶ ಮಾಹೇಶ್ವರಿ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಜಗದೀಶ ಶೆಟ್ಟರ, ಕಂದಾಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ. ದೇಶಪಾಂಡೆ, ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ ಸಚಿವ ಕೃಷ್ಣ ಬೈರೇಗೌಡ, ಸಂಸದ ಪ್ರಹ್ಲಾದ ಜೋಶಿ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ. ಹೈಕೋರ್ಟ್‌ ನ್ಯಾಯಮೂರ್ತಿಗಳಾದ ರವಿ ಮಳಿಮಠ, ಧಾರವಾಡ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಬೂದಿಹಾಳ ಆರ್‌.ಬಿ. ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ. ಒಟ್ಟು 36 ನ್ಯಾಯಮೂರ್ತಿಗಳು ಉದ್ಘಾಟನಾ ಸಮಾರಂಭಕ್ಕೆ ಆಗಮಿಸಲಿದ್ದಾರೆ

ನೂತನ ನ್ಯಾಯಾಲಯ ಸಂಕೀರ್ಣವು ಸಂಪೂರ್ಣ ಕೇಂದ್ರೀಕೃತ ಹವಾನಿಯಂತ್ರಿತ ವ್ಯವಸ್ಥೆಯೊಂದಿಗೆ ಹಲವು ವೈಶಿಷ್ಟÂಗಳನ್ನು ಹೊಂದಿದೆ. ಅನೇಕ ಅತ್ಯಾಧುನಿಕ ಸೌಕರ್ಯ ಹೊಂದಿದ ಏಷ್ಯಾದಲ್ಲಿಯೇ ಮೊದಲ ಮಾದರಿ ತಾಲೂಕು ನ್ಯಾಯಾಲಯ ಸಂಕೀರ್ಣವಾಗಿದ್ದು, ಇದು ಇನ್ನಿತರೆ ನ್ಯಾಯಾಲಯಗಳಿಗೂ ಮಾದರಿಯಾಗಿದೆ.
– ಗುರು ಹಿರೇಮಠ, ಹುಬ್ಬಳ್ಳಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ

– ಶಿವಶಂಕರ ಕಂಠಿ

Comments are closed.