ಕರ್ನಾಟಕ

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡೋ ಮಂದಿಗೆ ರವಿ ಚನ್ನಣ್ಣನವರ್ ಮನವಿ

Pinterest LinkedIn Tumblr

ಮೈಸೂರು: ಜಿಲ್ಲೆಯಲ್ಲಿ ಕಳೆದ 1 ವರ್ಷ 4 ತಿಂಗಳುಗಳಿಂದ ರಕ್ಷಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ. ಈ ಸಂದರ್ಭದಲ್ಲಿ ಯಾವುದೇ ಜಾತಿ, ಪಂಗಡ, ಧರ್ಮಕ್ಕೆ ಸೀಮಿತವಾಗದೆ, ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಗಮನದಲ್ಲಿಟ್ಟುಕೊಂಡು ಎಲ್ಲರ ಏಳಿಗೆಗಾಗಿ ಸಾಧ್ಯವಾದಷ್ಟು ಒಳ್ಳೆಯ ಕೆಲಸಗಳನ್ನು ಮಾಡಲು ಪ್ರಯತ್ನ ಪಟ್ಟಿದ್ದೇನೆ ಎಂದು ಮೈಸೂರು ಎಸ್‍ಪಿ ರವಿ ಡಿ ಚನ್ನಣ್ಣನವರ್ ಹೇಳಿದ್ದಾರೆ.

ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ಅವರು, ನಾನು ಪರಿಪೂರ್ಣನಲ್ಲ ಆದರೆ ಹುಣಸೂರಿನಲ್ಲಿ ನಡೆದ ಘಟನೆಗೆ ಕುರಿತಂತೆ ಹಲವಾರು ಜನ ಬೇರೆ-ಬೇರೆ ಬಣ್ಣವನ್ನು ಕೊಟ್ಟು ಮಾನ್ಯ ಗೌರವಾನ್ವಿತ ಸಂಸದರಿಗೆ ಮತ್ತು ನನಗೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ತುಣುಕುಗಳು ಹಾಗೂ ಫೋಟೋಗಳನ್ನು ಬಳಸಿ ಓಟು ಮಾಡಿ, ಯಾರಿಗೆ ನಿಮ್ಮ ಬೆಂಬಲ ಹಾಗೂ ಇನ್ನಿತರ ಬೇಡದ ಪೋಸ್ಟ್ ಗಳನ್ನು ಹಾಕುತ್ತಿರುವುದು ಸರಿಯಲ್ಲ ಎಂದು ಮನವಿ ಮಾಡಿದ್ದಾರೆ.

ನಾನು ರಕ್ಷಣಾಧಿಕಾರಿ ಹಾಗೂ ಅವರು ಮಾನ್ಯ ಸಂಸದರು ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ನಿತ್ಯ ಕರ್ತವ್ಯ ಮಾಡಬೇಕಾದರೆ ಕಾನೂನಿನ ಅಡಿಯಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ಕಾನೂನಿನ ಅಡಿಯಲ್ಲಿ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ ಹೊರತು ಯಾವುದೇ ವೈಯಕ್ತಿಕ ದ್ವೇಷ ಆಗಲಿ ಭಿನ್ನ ಅಭಿಪ್ರಾಯವಾಗಲಿ ಇಲ್ಲ. ಈ ಘಟನೆಯ ಕುರಿತಂತೆ ಜಿಲ್ಲಾಡಳಿತದ ವತಿಯಿಂದ, ಹುಣಸೂರಿನಲ್ಲಿ ಆದ ಘಟನೆಗಳನ್ನು ಆಧಾರಿತ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಲಾಗುವುದು. ಮೆರವಣಿಗೆಯನ್ನು ನಿಷೇಧಿಸಲಾಗಿದೆ ಎಂದು ಕೆಲವರು ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಾನ್ಯ ಜಿಲ್ಲಾಧಿಕಾರಿಗಳು ಮೆರವಣಿಗೆಯನ್ನ ನಿಷೇಧಿಸಿಲ್ಲ, ಮೆರವಣಿಗೆಗೆ ಇನ್ನೊಂದು ಪ್ರದೇಶವನ್ನು ಸೇರಿಸಬೇಕೆಂಬ ಬೇಡಿಕೆ ಇತ್ತು. ಮೆರವಣಿಗೆಯನ್ನು ನಿಷೇಧಿಸುವ ಅಧಿಕಾರ ಪೊಲೀಸ್ ಇಲಾಖೆಗೆ ಇಲ್ಲ. ಆದೇಶ ಮಾಡುವುದು, ನಿಷೇಧಿಸುವುದು, ಮಾರ್ಪಡಿಸುವುದು ದಂಡಾಧಿಕಾರಿಗಳಿಗೆ ಸೇರಿದ್ದು. ಪೊಲೀಸ್ ಇಲಾಖೆಗೆ ಮಾರ್ಪಡಿಸುವ ಅಥವಾ ನಿಷೇಧಿಸುವ, ಪರವಾನಗಿ ನೀಡುವ ಅಧಿಕಾರ ಇಲ್ಲ. ಮಾನ್ಯ ದಂಡಾಧಿಕಾರಿಗಳು ಹೊರಡಿಸುವ ಆದೇಶವನ್ನು ಪಾಲೀಸುವುದಷ್ಟೇ ನಮ್ಮ ಜವಾಬ್ದಾರಿ ಹಾಗೂ ನಾವು ಅದನ್ನೆ ಮಾಡಿದ್ದೇವೆ ಎಂದು ಸ್ಪಷ್ಟಡಿಸಿದರು.

ಮಾನ್ಯ ಸಂಸದರ ಬಗ್ಗೆ ನನಗೆ ಅಪಾರ ಗೌರವವಿದೆ. ಆದ್ದರಿಂದ ದಯಮಾಡಿ ಎಲ್ಲರಲ್ಲೂ ವೈಯಕ್ತಿಕವಾಗಿ ಬೇಡಿಕೊಳ್ಳುವುದೇನೆಂದರೆ ಮಾನ್ಯ ಸಂಸದರ ಹಾಗೂ ನನ್ನ ಭಾವಚಿತ್ರಗಳನ್ನು ಬಳಸಿ ಅವರ ಹೇಳಿಕೆ ಹಾಗೂ ನನ್ನ ಹೇಳಿಕೆಗಳಿಗೆ ಇಲ್ಲ ಸಲ್ಲದ ಹೋಲಿಕೆಗಳನ್ನ ಮಾಡುತ್ತಾ ತಿರುಗೇಟು ಕೊಟ್ಟರು ಎಂದು ಸುಖಾಸುಮ್ಮನೆ ಸುಳ್ಳು ಸುದ್ದಿಗಳನ್ನು ಹರಡುತ್ತಿರುವುದನ್ನು ನಿಲ್ಲಿಸಬೇಕು. ಹಾಗಾಗಿ ಈ ಸುಳ್ಳು ಸುದ್ದಿಗಳ ಬಗ್ಗೆ ಯಾರು ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ.

Comments are closed.