ಕೊಪ್ಪಳ: ರಾಜ್ಯದೆಲ್ಲೆಡೆ ಬರ ತಾಂಡವವಾಡುತ್ತಿದೆ. ನೀರಿಲ್ಲದೇ ಬಿತ್ತಿದ ಬೆಳೆಗಳು ಒಣಗಿ ಹೋಗಿ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಆದರೆ ಕೊಪ್ಪಳದ ಹೂ ಬೇಸಾಯ ಮಾಡುವ ರೈತನೊಬ್ಬ ಬರಕ್ಕೆ ಸೆಡ್ಡು ಹೊಡೆದು ತನ್ನ ಅರ್ಧ ಎಕರೆ ಜಮೀನಿನಲ್ಲಿ ಹೂವು ಬೆಳೆದು ಲಾಭ ಗಳಿಸುತ್ತಿದ್ದಾನೆ.
ಕೊಪ್ಪಳದ ಬೆಲೂರ್ ಗ್ರಾಮದ ದಾವಲ್ ಸಾಬ್ ಎಂಬಾತ ಅರ್ಧ ಎಕರೆ ಜಮೀನಿನಲ್ಲಿ ಸುಗಂಧರಾಜ ಹೂ ಬೇಸಾಯ ಮಾಡಿದ್ದಾನೆ. ಈ ಹೂವಿಗೆ ದಾವಣಗೆರೆ ಮತ್ತು ತುಮಕೂರಿನ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ.
ಪ್ರತಿದಿನ ಸುಮಾರು 15 ರಿಂದ 20 ಕೆಜಿ ಹೂ ಸಿಗುತ್ತದೆ. ಮಾರುಕಟ್ಟೆಯಲ್ಲಿ ಕೆಜಿಗೆ 50 ರಿಂದ 60 ರುಪಾಯಿ ಬೆಲೆ ಇರುತ್ತದೆ. ಹಬ್ಬದ ಸಮಯದಲ್ಲಿ ಪ್ರತಿ ಕೆಜಿಗೆ 150 ರು ಬೆಲೆ ಇರುತ್ತದೆ. ಸುಮಾರು 3 ದಿನಗಳ ಕಾಲ ಈ ಹೂವನ್ನು ಸಂಗ್ರಹಿಸಿಡಬಹುದಾಗಿದೆ. ಶ್ರಾವಣ ತಿಂಗಳಲ್ಲಿ ಈ ಹೂವಿಗೆ ಭಾರೀ ಬೇಡಿಕೆ ಇರುತ್ತದೆ. ವ್ಯವಸಾಯಕ್ಕೆ ಮಾಡಿದ ಖರ್ಚು ತೆಗೆದರೇ ವಾರ್ಷಿಕವಾಗಿ ಸುಮಾರು ಎರಡೂವರೆ ಲಕ್ಷ ರು ಆದಾಯ ಸಿಗುತ್ತದೆ ಎಂದು ಹೂ ಬೆಳೆದು ಬದುಕು ಕಟ್ಟಿಕೊಂಡ ದಾವಲ್ ಸಾಬ್ ಹೇಳುತ್ತಾರೆ.
ಪದವಿ ಮುಗಿದ ನಂತರ ಯಾವುದೇ ಸರ್ಕಾರಿ ಅಥವಾ ಖಾಸಗಿ ಉದ್ಯೋಗಕ್ಕೆ ಸೇರದೇ ಕೃಷಿಯನ್ನು ಆಯ್ಕೆ ಮಾಡಿಕೊಂಡೆ. ತೋಟಗಾರಿಕೆ ಇಲಾಖೆಯ ಸಹಾಯ ಪಡೆದು ಹೂ ಬೆಳೆಯಲು ಆರಂಭಿಸಿದೆ. ಇದರಿಂದ ನಾನು ಸಂತೋಷವಾಗಿ ಬದುಕುತ್ತಿದ್ದೇನೆ ಎಂದು ದಾವಲ್ ಸಾಬ್ ತಿಳಿಸಿದ್ದಾರೆ.
ಕರ್ನಾಟಕ
Comments are closed.