ಕರ್ನಾಟಕ

10 ತಿಂಗಳ ಹಿಂದೆ ನಡೆದಿದ್ದ ಮಹಿಳಾ ಸಾಫ್ಟ್ ವೇರ್ ಎಂಜಿನಿಯರ್ ಆತ್ಮಹತ್ಯೆಗೆ ರೋಚಕ ಟ್ವಿಸ್ಟ್

Pinterest LinkedIn Tumblr

josthnaಬೆಂಗಳೂರು: 10 ತಿಂಗಳ ಹಿಂದೆ ನಡೆದಿದ್ದ ಆತ್ಮಹತ್ಯೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ವರದಕ್ಷಿಣೆ ಕಿರುಕುಳಕ್ಕೆ ಆತ್ಮಹತ್ಯೆ ಎಂದು ದಾಖಲಾಗಿದ್ದ ಪ್ರಕರಣ, ಅಕ್ರಮ ಸಂಬಂಧ ಬಯಲಾಗುವ ಭೀತಿಯಿಂದ ಮಾಡಿಕೊಂಡಿದ್ದ ಆತ್ಮಹತ್ಯೆ ಎಂದು ಪೊಲೀಸರ ತನಿಖೆಯಿಂದ ಬಯಲಾಗಿದೆ.

ಅಂದೇನಾಗಿತ್ತು?: ನಗರದ ಕೆ.ಆರ್.ಪುರಂನ ಅಯ್ಯಪ್ಪನಗರದಲ್ಲಿ 24 ವರ್ಷದ ಜ್ಯೋತ್ಸ್ನಾ ಪತಿ ವೆಂಕಟ ಜಗದೀಶ್ ಜೊತೆ ಅಪಾರ್ಟ್‍ಮೆಂಟ್‍ನಲ್ಲಿ ವಾಸವಾಗಿದ್ದರು. ಇವರಿಬ್ಬರೂ ಮೂಲತಃ ಆಂಧ್ರದವರು, ಜೊತೆಗೆ ಸಾಫ್ಟ್ ವೇರ್ ಎಂಜಿನಿಯರ್‍ಗಳು. ಸುಮಾರು 1 ವರ್ಷದ ದಾಂಪತ್ಯದ ಬಳಿಕ ಕಳೆದ ವರ್ಷ ಡಿಸೆಂಬರ್ 4 ರಂದು ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದ ಜ್ಯೋತ್ಸ್ನಾ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು.

ಆ ಎಸ್‍ಎಂಎಸ್‍ನಲ್ಲೇನಿತ್ತು?: ಅಂದು ಪೊಲೀಸ್ ವಿಚಾರಣೆ ವೇಳೆ ಆತ್ಮಹತ್ಯೆಗೂ ಮುನ್ನ ಜ್ಯೋತ್ಸ್ನಾ ತನ್ನದೇ ಮೊಬೈಲ್‍ಗೆ ಒಂದು ಎಸ್‍ಎಂಎಸ್ ಕಳಿಸಿದ್ದ ವಿಚಾರ ಬೆಳಕಿಗೆ ಬಂತು. ‘ನನಗೆ ಹೃದಯ ಸಂಬಂಧಿ ಕಾಯಿಲೆಯಿದೆ. ಆದರೆ ಇದರ ಚಿಕಿತ್ಸೆ ದುಬಾರಿ. ಅಷ್ಟು ಹಣ ಹೊಂದಿಸಲು ಸಾಧ್ಯವಾಗದೇ ಇರುವುದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎನ್ನುವುದು ಎಸ್‍ಎಂಎಸ್ ಸಾರಾಂಶ.

ಆತ್ಮಹತ್ಯೆ ವಿಷಯ ತಿಳಿದು ಬೆಂಗಳೂರಿಗೆ ಆಗಮಿಸಿದ್ದ ಜ್ಯೋತ್ಸ್ನಾ ಪೋಷಕರು ಪತಿ ವೆಂಕಟ ಜಗದೀಶ್ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ದಾಖಲಿಸಿದ್ದರು. ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಬಳಿಕ ಪತಿ ವೆಂಕಟ ಜಗದೀಶ್‍ನನ್ನು ಪೊಲೀಸರು ಬಂಧಿಸಿದ್ದರು. ಹೀಗೆ ಅರೆಸ್ಟ್ ಆದ ವೆಂಕಟ ಜಗದೀಶ್, ಇದೇ ವರ್ಷ ಜನವರಿ 7 ರಂದು ಬಿಡುಗಡೆಯಾಗಿದ್ದರು.

ನಿಜದ ದಾರಿಯ ಹುಡುಕಿ: ಠಾಣೆಯಿಂದ ಬಿಡುಗಡೆಯಾದ ವೆಂಕಟ ಜಗದೀಶ್ ತನ್ನ ಪತ್ನಿಯ ಆತ್ಮಹತ್ಯೆಗೆ ನಿಜವಾದ ಕಾರಣ ಹುಡುಕುತ್ತ ಹೋದರು. ನಾನು ಏನೂ ತಪ್ಪು ಮಾಡದಿದ್ದರೂ ನನ್ನನ್ನು ಜೈಲಿಗೆ ಹಾಕಿದ್ರು. ಇದರ ಬಗ್ಗೆ ತನಿಖೆ ನಡೆಸುವಂತೆ ವೆಂಕಟ ಜಗದೀಶ್ ಪೊಲೀಸರಿಗೆ ಮನವಿ ಮಾಡಿದರು.

ಜಗದೀಶ್ ದೂರಿನ ಆಧಾರದಲ್ಲಿ ತನಿಖೆ ನಡೆಸಲು ಆರಂಭಿಸಿದ ಪೊಲೀಸರಿಗೆ ಅಚ್ಚರಿಯ ಮೇಲೆ ಅಚ್ಚರಿ ಕಾದಿತ್ತು. ಜ್ಯೋತ್ಸ್ನಾಳ ಮೊಬೈಲ್ ಮುಂದಿಟ್ಟುಕೊಂಡು ತನಿಖೆ ಆರಂಭಿಸಿದ ಪೊಲೀಸರು ಮೊದಲು ಕಾಲ್ ಡಿಟೇಲ್ ಚೆಕ್ ಮಾಡಿದ್ರು.

ಬಯಲಾಯ್ತು ಲವ್ ಕೇಸ್: ಕಾಲ್ ಡಿಟೇಲ್ ತೆಗೆದು ನೋಡಿದಾಗ ಆಕೆ ಕಾಲೇಜಿನಲ್ಲಿ ಆಕೆಯ ಸೀನಿಯರ್ ಆಗಿದ್ದ ಗಿರೀಶ್ ಪಟ್ನಾಯಕ್ ಎಂಬಾತನ ಜೊತೆ ಹೆಚ್ಚು ಬಾರಿ ಮಾತನಾಡಿದ್ದು ಬೆಳಕಿಗೆ ಬಂದಿದೆ. ಮತ್ತಷ್ಟು ಆಳಕ್ಕಿಳಿದು ತನಿಖೆಯ ಹಾದಿ ಮುಂದುವರಿದಾಗ ಆಕೆಗೆ ಆತನ ಜೊತೆ ಇದ್ದ ಲವ್ವಿ ಡವ್ವಿ ಬಯಲಾಗಿದೆ. ಆಕೆಯ ಮೊಬೈಲ್ ಫೋನ್ ತುಂಬಾ ಮೆಸೇಜ್, ಫೋಟೋಗಳು, ವೀಡಿಯೋಗಳು ಪತ್ತೆಯಾಗಿವೆ. ಅದರಲ್ಲೂ ಒಂದು ಫೋಟೋದಲ್ಲಂತೂ ಇಬ್ಬರು ಗಂಡ ಹೆಂಡಿರಂತೆ ಜೊತೆಯಾಗಿ ಫೋಟೋ ತೆಗೆದುಕೊಂಡಿದ್ದರು.

ಅವನಿಗೆ ಬೇರೆ ಮದುವೆ ಫಿಕ್ಸಾಯ್ತು!: ಅಚ್ಚರಿ ಎಂದರೆ ಜ್ಯೋತ್ಸ್ನಾಗೆ ವೆಂಕಟ ಜಗದೀಶ್‍ನನ್ನು ಮದುವೆಯಾಗಲು ಇಷ್ಟವಿರಲಿಲ್ಲ. ಆದರೂ ಮನೆಯವರು ಒತ್ತಾಯಪೂರ್ವಕವಾಗಿ ಜ್ಯೋತ್ಸ್ನಾಗೆ ಮದುವೆ ಮಾಡಿಸಿದ್ರು. ಮದುವೆಯಾಗಿ ಸಂಸಾರಾನೂ ಚೆನ್ನಾಗಿ ನಡೆಯುತ್ತಿರಲಿಲ್ಲ. ಒಂದಲ್ಲಾ ಒಂದು ವಿಚಾರಕ್ಕೆ ಸಂಬಂಧಪಟ್ಟಂತೆ ಗಲಾಟೆಗಳು ನಡೆಯುತ್ತಲೇ ಇತ್ತು. ಮದುವೆಯ ಬಳಿಕವೂ ಜ್ಯೋತ್ಸ್ನಾ ಸೀನಿಯರ್ ಗಿರೀಶ್ ಜೊತೆ ಸಂಬಂಧ ಮುಂದುವರಿಸಿದ್ದಳು. ಇದೆಲ್ಲವೂ ಗುಪ್ತ್ ಗುಪ್ತ್ ಆಗಿ ನಡೆಯುತ್ತಿತ್ತು. ಈ ನಡುವೆ ಜ್ಯೋತ್ಸ್ನಾ ಲವರ್ ಗಿರೀಶ್ ಪಟ್ನಾಯಕ್‍ಗೆ ಮದುವೆ ಫಿಕ್ಸ್ ಆಗಿತ್ತು. ಗಿರೀಶ್ ಕೂಡಾ ನಾವು ದೂರಾಗೋಣ ಅಂತಾ ಆಕೆಯನ್ನು ಅವಾಯ್ಡ್ ಮಾಡುತ್ತಾನೆ. ಗಿರೀಶ್ ಮತ್ತು ಜ್ಯೋತ್ಸ್ನಾ ಸಂಬಂಧದ ಬಗ್ಗೆ ಮದುವೆಯಾಗಬೇಕಿದ್ದ ಹುಡುಗಿಗೆ ಗೊತ್ತಾಗಿದೆ. ಡಿಸೆಂಬರ್ 3ರಂದು ಆಕೆಯ ಮನೆಯವರು ಜ್ಯೋತ್ಸ್ನಾಗೆ ಕಾಲ್ ಮಾಡಿ ಬೈದಿದ್ದರು. ಗಂಡ ವೆಂಕಟ ಜಗದೀಶ್‍ಗೂ ಈ ವಿಷಯ ಹೇಳುತ್ತೇವೆ ಎಂದು ಹೆದರಿಸಿದ್ದರು. ಎಲ್ಲಿ ತನ್ನ ಚಕ್ಕಂದದಾಟ ಬಯಲಾಗುತ್ತೋ ಎಂಬ ಭೀತಿಯಿಂದ ಡಿಸೆಂಬರ್ 4ರಂದು ತನ್ನದೇ ಮೊಬೈಲ್‍ಗೆ ‘ಹೃದಯ’ದ ನೋವಿನ ಎಸ್‍ಎಂಎಸ್ ಕಳಿಸಿ ಜ್ಯೋತ್ಸ್ನಾ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದೀಗ ಸಾಕ್ಷಿ ಸಮೇತ ಸಿಕ್ಕಿ ಬಿದ್ದ ಗಿರೀಶ್ ಪಟ್ನಾಯಕ್‍ನನ್ನು ಪತಿ ವೆಂಕಟ್ ಜಗದೀಶ್ ನೀಡಿದ ದೂರಿನ ಮೇಲೆ ಆಂಧ್ರ ಶ್ರೀಕಾಕುಳಂನಲ್ಲಿ ಬಂಧಿಸಿದ್ದಾರೆ. ಕಳೆದ 11 ತಿಂಗಳ ಹಿಂದೆ ನಡೆದಿದ್ದ ಆತ್ಮಹತ್ಯೆ ವಿಚಿತ್ರ ತಿರುವು ಪಡೆದುಕೊಂಡು ಗಿರೀಶ್ ಬಂಧನದೊಂದಿಗೆ ಅಂತ್ಯ ಕಂಡಿದೆ.

Comments are closed.