ಕೃಷ್ಣರಾಜಪೇಟೆ: ತಾಲೂಕಿನ ಹೇಮಗಿರಿಯ ಬಳಿ ಹೇಮಾವತಿ ನದಿಯಲ್ಲಿ ಪ್ರವಾಹಕ್ಕೆ ಸಿಲುಕಿದ್ದ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಪಟ್ಟಣದ ಅಗ್ನಿಶಾಮಕ ಸಿಬ್ಬಂಧಿಗಳು ಜೀವದ ಹಂಗು ತೊರೆದು ರಕ್ಷಣೆ ಮಾಡಿರುವ ಘಟನೆಯು ಸಂಜೆ ವರದಿಯಾಗಿದೆ.
ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ಅಕ್ಷಯಗೌಡ(23) ಮತ್ತು ಮೇಘದರ್ಶನ್(24) ಹೇಮಗಿರಿಯ ಬಳಿ ಹೇಮಾವತಿ ನದಿಯ ಅಣೆಕಟ್ಟೆಯ ಬಳಿ ಫಾಲ್ಸ್ ಸಮೇತ ಸೆಲ್ಫಿ ಫೋಟೋ ತೆಗೆದು ಕೊಳ್ಳಲು ಹೇಮಾವತಿ ನದಿಯಲ್ಲಿ ಇಳಿದಾಗ ನೀರಿನಲ್ಲಿ ಹರಿವು ಹೆಚ್ಚಾಗಿ ದಡಕ್ಕೆ ಬರಲು ಸಾಧ್ಯವಾಗದೇ ಅಣೆಕಟ್ಟೆಯ ಮುಂಭಾಗದಲ್ಲಿನ ಬಂಡೆಯನ್ನು ಏರಿ ಕುಳಿತು ಸಹಾಯಕ್ಕಾಗಿ ಪಟ್ಟಣದ ಅಗ್ನಿಶಾಮಕ ಠಾಣೆಗೆ ಮೊಬೈಲ್ ಫೋನಿನಲ್ಲಿ ಕರೆ ಮಾಡಿ ಸಹಾಯ ಕೇಳಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ನಿಂಗೇಗೌಡ, ಹರೀಶ್ ಮತ್ತು ಸಿಬ್ಬಂಧಿಗಳು ಇಬ್ಬರೂ ಯುವಕರನ್ನು ಹಗ್ಗದ ಸಹಾಯದಿಂದ ಸಂರಕ್ಷಣೆ ಮಾಡಿ ಸುರಕ್ಷಿತವಾಗಿ ದಡಕ್ಕೆ ಕರೆ ತಂದಿದ್ದಾರೆ.
ಧೃತಿಗೆಡದ ಯುವಕರು:
ಮಧ್ಯಾಹ್ನದಿಂದಲೂ ನೀರಿನ ಮಧ್ಯದಲ್ಲಿ ಸಲುಕಿದ್ದರೂ ಧೃತಿಗೆಡದೇ ಅಗ್ನಿಶಾಮಕ ಠಾಣೆಯ ಸಿಬ್ಬಂಧಿಗಳ ಸಹಾಯಕ್ಕಾಗಿ ಕಾದು ಕುಳಿತ ಅಕ್ಷಯಗೌಡ ಮತ್ತು ಮೇಘದರ್ಶನ್ ಸಂಜೆಯವರೆಗೂ ಧೈರ್ಯದಿಂದಿದ್ದು ತಮ್ಮನ್ನು ಸುರಕ್ಷಿತವಾಗಿ ದಡ ತಲುಪಿಸಿದ ಅಗ್ನಿಶಾಮಕ ಸಿಬ್ಬಂಧಿಗಳ ಸಹಾಯವನ್ನು ಮುಕ್ತಕಂಠದಿಂದ ಹೊಗಳಿದರಲ್ಲದೇ ತಮ್ಮ ಜೀವಮಾನದುದ್ದಕ್ಕೂ ಸ್ಮರಿಸುವುದಾಗಿ ಹೇಳಿದರು.
Comments are closed.