ಬೆಂಗಳೂರು: ಭಿನ್ನರಲ್ಲೆ ಭಿನ್ನರಾಗ ಎದುರಾಗಿದ್ದರಿಂದ ಸಿಎಂ ಹಠಾವೋ ಕಾಂಗ್ರೆಸ್ ಬಚಾವೋ ಕೂಗು ಥಂಡಾ ಹೊಡೆದಿದೆ ಎಂದು ಮೂಲಗಳು ತಿಳಿಸಿವೆ.
ಭಿನ್ನಮತೀಯ ಶಾಸಕರಲ್ಲಿ ಮೊದಲಿದ್ದ ಹುಮ್ಮಸ್ಸು ಇದೀಗ ಉಳಿದಿಲ್ಲ. ನಾಳೆ ನಿಗದಿಯಾಗಿದ್ದ ಕಾಂಗ್ರೆಸ್ ಅತೃಪ್ತ ಶಾಸಕರ ಸಭೆ ನಡೆಯೋದೇ ಅನುಮಾನವಾಗಿದ್ದರಿಂದ, ಬಂಡಾಯದ ಕೂಗು ತಣ್ಣಗಾಗಿದೆ ಎಂದು ಹೇಳಲಾಗುತ್ತಿದೆ.
ಅತೃಪ್ತ ಶಾಸಕರ ಬಣದಲ್ಲಿ ಈಗಾಗಲೇ ಕೆಲವು ಶಾಸಕರಿಗೆ ಬಿಡಿಎ ಸದಸ್ಯ ಸ್ಥಾನ, ಮತ್ತು ಇತರ ಕೆಲ ಆಮಿಷಗಳಿಗೆ ಶಾಸಕರು ಮರಳಾಗುತ್ತಿದ್ದು, ಒಂದು ವೇಳೆ, ಪಕ್ಷದ ವಿರುದ್ಧ ಅಶಿಸ್ತಿನಿಂದ ವರ್ತಿಸಿದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೈಕಮಾಂಡ್ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಹಿರಿಯ ಕಾಂಗ್ರೆಸ್ ಮುಖಂಡ ವಿ.ಶ್ರೀನಿವಾಸ್ ಪ್ರಸಾದ್ ಅವರನ್ನು ಸಮಾಧಾನ ಪಡಿಸಲು ಹಿರಿಯದಲಿತ ಮುಖಂಡ ಮಾಜಿ ಕೇಂದ್ರ ಗೃಹ ಸಚಿವರೊಬ್ಬರನ್ನು ರಾಜ್ಯಕ್ಕೆ ಕಳುಹಿಸಲು ಹೈಕಮಾಂಡ್ ಸೂಚನೆ ನೀಡಿದೆ.
ಕೆಲವು ಶಾಸಕರಿಗೆ ರಾಜ್ಯದ ಉಸ್ತುವಾರಿ ಹೊತ್ತಿರುವ ದಿಗ್ವಿಜಯ್ ಸಿಂಗ್ ವಿರುದ್ಧ ಅಸಮಾಧಾನವಿರುವ ಹಿನ್ನೆಲೆಯಲ್ಲಿ ಅವರ ಬದಲಿಗೆ ಬೇರೆಯವರನ್ನು ಸಂಧಾನಕ್ಕಾಗಿ ರವಾನಿಸಿಲು ಹೈಕಮಾಂಡ್ ಚಿಂತನೆ ನಡೆಸಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.
Comments are closed.