ಪಾಂಡವಪುರ, ಮೇ 28- ಅಕ್ರಮ ಸಂಬಂಧಕ್ಕೆ ಒಪ್ಪದ ಅತ್ತಿಗೆಯನ್ನೇ ಮೈದುನ ಕುತ್ತಿಗೆ ಕೊಯ್ದು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ತಾಲ್ಲೂಕಿನ ಕಣಿವೆ ಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಮೈದುನನಿಂದ ಹತ್ಯೆಗೀಡಾದ ಮಹಿಳೆಯನ್ನು ವಿಶಾಲಾಕ್ಷಿ (45) ಎಂದು ಗುರುತಿಸಲಾಗಿದೆ. ಅತ್ತಿಗೆಯನ್ನು ಕೊಲೆ ಮಾಡಿ ಪರಾರಿಯಾಗಿರುವ ಮೈದುನ ರಾಜು ಬಂಧನಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಬಸವರಾಜು ಮತ್ತು ರಾಜು ಸಹೋದರರಾಗಿದ್ದು , ಆಸ್ತಿ ಭಾಗವಾದ ನಂತರ ಮನೆಯ ಮಧ್ಯೆ ಗೋಡೆ ನಿರ್ಮಿಸಿಕೊಂಡು ಪ್ರತ್ಯೇಕವಾಗಿ ವಾಸಿಸುತ್ತಿದ್ದರು.
ಕಾಮುಕನಾಗಿದ್ದ ರಾಜು ತಾಯಿ ಸಮಾನರಾದ ಅತ್ತಿಗೆಯ ಮೇಲೆ ಎರಡು ಮೂರು ಬಾರಿ ಅತ್ಯಾಚಾರಕ್ಕೆ ಯತ್ನಿಸಿದ್ದ ಎನ್ನಲಾಗಿದೆ. ನಿನ್ನೆ ಏಕಾಏಕಿ ಮನೆ ಮಧ್ಯ ಭಾಗದ ಗೋಡೆ ಹಾರಿ ಬಂದು ಬಸವರಾಜು ಮನೆಯ ಟಿವಿ ಆನ್ ಮಾಡಿ ಒಂಟಿಯಾಗಿದ್ದ ವಿಶಾಲಾಕ್ಷಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮೈದುನನ ವಾಂಚೆಗೆ ಅತ್ತಿಗೆ ಸಹಕರಿಸದ ಹಿನ್ನೆಲೆಯಲ್ಲಿ ಕೋಪೋದ್ರಿಕ್ತನಾದ ರಾಜು ಚಾಕುವಿನಿಂದ ಆಕೆಯ ಕತ್ತು ಕೊಯ್ದು ಎದೆ ಭಾಗಕ್ಕೆ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಕೆಲಸಕ್ಕೆ ಹೋಗಿದ್ದ ಪತಿ ಬಸವರಾಜು ರಾತ್ರಿ ಮನೆಗೆ ವಾಪಸಾಗುತ್ತಿದ್ದಂತೆ ತಮ್ಮನ ಕೃತ್ಯ ಬಯಲಾಗಿದೆ. ಈ ಕುರಿತಂತೆ ಬಸವರಾಜು ನೀಡಿದ ದೂರಿನ ಆಧಾರದ ಮೇಲೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಪಾಂಡವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ರಾಜು ಬಂಧನಕ್ಕೆ ಜಾಲ ಬೀಸಿದ್ದಾರೆ.
Comments are closed.