ಹಾಸನ: ತಾಲೂಕಿನ ಕೆರೆಮುಂದಲ ಕೊಪ್ಪಲು ಗ್ರಾಮದ ನಾಟಿ ಕೋಳಿ ಸಾಕಣೆ ಫಾರಂ ಒಂದಕ್ಕೆ ಮಂಗಳವಾರ ಬೆಳಗ್ಗೆ ನುಗ್ಗಿದ ಚಿರತೆ ಮರಿಯೊಂದು ಕೋಳಿಗಳನ್ನೂ ಕಬಳಿಸಿ, ಅರಣ್ಯ ಇಲಾಖೆ ಅಧಿಕಾರಿಗಳಿಗೂ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗುವಲ್ಲಿ ಯಶಸ್ವಿಯಾಯಿತು.
ದೊರೆಸ್ವಾಮಿ ಎಂಬವರಿಗೆ ಸೇರಿದ ನಾಟಿ ಕೋಳಿ ಫಾರಂಗೆ ಬೆಳಗಿನ ಜಾವ ನುಗ್ಗಿದ್ದ 6 ತಿಂಗಳು ಪ್ರಾಯದ ಚಿರತೆ ಮರಿಯೊಂದು ಕೋಳಿಗಳನ್ನು ಹಿಡಿದು ತಿಂದು ಹಾಕಿತ್ತು. ಕೋಳಿಗಳ ಕಿರುಚಾಟದಿಂದ ಎಚ್ಚೆತ್ತ ಫಾರಂ ಮಾಲೀಕ ಬಂದು ನೋಡಿದಾಗ ಚಿರತೆ ಒಳಗೆ ನುಗ್ಗಿ ಕೋಳಿಗಳನ್ನು ಕಬಳಿಸುತ್ತಿರುವುದು ಕಣ್ಣಿಗೆ ಬಿತ್ತು. ತಕ್ಷಣ ಕೋಳಿಗಳನ್ನು ಕೂಡಿ ಹಾಕಿದ್ದ ಕೊಠಡಿಯ ಬಾಗಿಲು ಮುಚ್ಚಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದರು.
ಚಿರತೆ ಮರಿಯನ್ನು ಸೆರೆಹಿಡಿಯಲು ಸನ್ನದ್ಧರಾಗಿ ಬಂದ ಅರಣ್ಯಾಧಿಕಾರಿಗಳು, ಸಿಬ್ಬಂದಿ ತಂಡ ಕೋಳಿ ಗೂಡಿನ ಸುತ್ತಲೂ ಬಲೆ ಹರಡಿ ಚಿರತೆ ಹಿಡಿಯಲು ಪ್ರಯತ್ನಿಸಿದರು. ಅರಿವಳಿಕೆ ಚುಚ್ಚುಮದ್ದು ನೀಡಲು ಪ್ರಯತ್ನಿಸಿದರು. ಆದರೆ ಅದರಿಂದ ತಪ್ಪಿಸಿಕೊಂಡ ಚಿರತೆ ಕೋಳಿ ಗೂಡಿನ ಛಾವಣಿಯಿಂದ ಹೊರಗೆ ಹಾರಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.