ಬೆಂಗಳೂರು: ಪ್ಲಾಸ್ಟಿಕ್ ನಿಷೇಧದ ಹೊರತಾಗಿಯೂ ನಗರದಲ್ಲಿ ಪ್ಲಾಸ್ಟಿಕ್ ಕಸದ ಪ್ರಮಾಣ ಕಡಿಮೆಯಾಗದೇ ಇರುವುದರಿಂದ ಕಠಿಣ ಕ್ರಮಕ್ಕೆ ಮುಂದಾಗಿರುವ ಬಿಬಿಎಂಪಿ ಯಾರೇ ಪ್ಲಾಸ್ಟಿಕ್ ಕವರ್ ಹಿಡಿದಿದ್ದರೂ ಅವರಿಗೆ 500 ರು. ದಂಡವಿಧಿಸುವುದಾಗಿ ಘೋಷಣೆ ಮಾಡಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದ್ದು, ತರಕಾರಿ ಮತ್ತಿತರ ವಸ್ತುಗಳನ್ನು ಖರೀದಿಸಲು ಪ್ಲಾಸ್ಟಿಕ್ ಬ್ಯಾಗ್ಗಳನ್ನು ಕೊಂಡೊಯ್ಯುವ ಸಾರ್ವಜನಿಕರಿಗೆ 500 ರು. ದಂಡ ವಿಧಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.
ಪರಿಸರ ಹಾನಿ ತಪ್ಪಿಸಲು ಮತ್ತು ಪ್ಲಾಸ್ಟಿಕ್ ತ್ಯಾಜ್ಯ ಸಮಸ್ಯೆ ಕಡಿಮೆ ಮಾಡಲು ರಾಜ್ಯದೆಲ್ಲೆಡೆ ಪ್ಲಾಸ್ಟಿಕ್ ನಿಷೇಧ ಮಾಡಲಾಗಿದ್ದರೂ, ಅದು ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ಇಂದಿಗೂ ಪ್ಲಾಸ್ಟಿಕ್ ಕವರ್ ಗಳನ್ನು ಎಗ್ಗಿಲ್ಲದೇ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ನೇರವಾಗಿ ಗ್ರಾಹಕರ ಮೇಲೇ ಪ್ರಹಾರ ಮಾಡಲು ಮುಂದಾಗಿರುವ ಬಿಬಿಎಂಪಿ ರಸ್ತೆಗಳಲ್ಲೇ ಸಾರ್ವಜನಿಕರು ಪ್ಲಾಸ್ಟಿಕ್ ಕವರ್ ಹಿಡಿದಿದ್ದರೆ ಅವರಿಗೆ ದಂಡ ಹಾಕಲು ನಿರ್ಧರಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಮಾರಾಟ ಮಳಿಗೆ ಮತ್ತು ಉತ್ಪಾದನಾ ಕಾರ್ಖಾನೆಗಳ ಮೇಲೆ ದಾಳಿ ಮಾಡಿ ಪ್ಲಾಸ್ಟಿಕ್ ದಾಸ್ತಾನನ್ನು ವಶಕ್ಕೆ ಪಡೆದು ದಂಡ ವಿಧಿಸ ಲಾಗುತ್ತಿದೆ. ಆದರೂ, ಪ್ಲಾಸ್ಟಿಕ್ ವಸ್ತುಗಳ ಬಳಕೆ ಕಡಿಮೆ ಮಾಡಲು ಸಾಧ್ಯ ಆಗುತ್ತಿಲ್ಲ. ಕದ್ದು ಮುಚ್ಚಿ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಸಾಗಿದ್ದು, ಪ್ಲಾಸ್ಟಿಕ್ ನಿಷೇಧ ಗ್ರಾಹಕರ ಮೇಲೆ ಅಷ್ಟೇನೂ ಪರಿಣಾಮ ಬೀರಿಲ್ಲ. ಹೀಗಾಗಿ ಸಾರ್ವಜನಿಕರಿಗೂ ದಂಡ ವಿಧಿಸುವ ಮೂಲಕ, ಪ್ಲಾಸ್ಟಿಕ್ ಚೀಲ ಬಳಕೆಯನ್ನು ನಿಯಂತ್ರಿಸಲು ಪಾಲಿಕೆ ನಿರ್ಧರಿಸಿದೆ. ಸದ್ಯ ಇದು ಚರ್ಚೆಯ ಹಂತದಲ್ಲಿದ್ದು, ಈ ನಿಯಮ ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರುವ ಸಾಧ್ಯತೆ ಇದೆ.