ಮಂಡ್ಯ,ಮೇ 9-ಸಾಲಬಾಧೆಯಿಂದ ರೈತನೊಬ್ಬ ಕ್ರಿಮಿನಾಶಕ ಔಷಧಿ ಸೇವಿಸಿ ಸಾವನ್ನಪ್ಪಿರುವ ಘಟನೆ ಭಾರತೀನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಿ.ವಿ.ವೆಂಕಟೇಶ್(45) ಮೃತಪಟ್ಟ ರೈತ. ಕೆ.ಎಂ.ದೊಡ್ಡಿಯ ತನ್ನ 15 ಕುಂಟೆ ಜಮೀನು, ಬೆಳಕತ್ತೂರಿನಲ್ಲಿಯೂ ಜಮೀನಿದ್ದು , ಸಹಕಾರ ಸಂಘದಿಂದ 40 ಸಾವಿರ ರೂ. ಟ್ರ್ಯಾಕ್ಟರ್ಗಾಗಿ ಸಾಲ ಹಾಗೂ ಎಂಟು ಲಕ್ಷ ರೂ. ಕೈ ಸಾಲ ಮಾಡಿಕೊಂಡಿದ್ದನು. ಅಲ್ಲದೆ ಜಮೀನಿನಲ್ಲಿ ಬೆಳೆದಿದ್ದ ಬೆಳೆ ನೀರಿಲ್ಲದೆ ಒಣಗಿದ್ದು, ಭಾರೀ ನಷ್ಟವುಂಟಾಗಿದ್ದರಿಂದ ಸಾಲ ತೀರಿಸುವುದು ಹೇಗೆ ಎಂದು ದಿಕ್ಕು ತೋಚದೆ ಕ್ರಿಮಿನಾಶಕ ಔಷಧಿ ಸೇವಿಸಿದ್ದಾನೆ.
ಕೂಡಲೇ ಮನೆಯವರು ವೆಂಕಟೇಶ್ನನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯಕ್ಕೆ ಕರೆದೊಯ್ಯುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಡಿಸಿ ತಮಣ್ಣ , ತಹಸೀಲ್ದಾರ್ ಭೇಟಿ ನೀಡಿದ್ದಾರೆ.
ಸಾಲಬಾಧೆ: ರೈತ ನೇಣಿಗೆ ಶರಣು
ಚಿಕ್ಕಬಳ್ಳಾಪುರ, ಮೇ 9- ಸಾಲಬಾಧೆ ತಾಳಲಾರದೆ ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಡಿಬಂಡೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಊರುವಾಕಲಿ ಗಂಗಪ್ಪ (56) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ಕೈತುಂಬ ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲಾಗದೆ ಮನನೊಂದು ಚೆಂಜಡೂರುಹೊರ ಭಾಗದಲ್ಲಿರುವ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಗುಡಿಬಂಡೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.