ಮಂಡ್ಯ, ಏ.4- ಬ್ಯಾಂಕ್ನ 74 ಲಕ್ಷ ರೂ. ಹಣ ದುರುಪಯೋಗ ಪ್ರಕರಣ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆ ಪಟ್ಟಣದ ಡಿಸಿಸಿ ಬ್ಯಾಂಕ್ನ ಮ್ಯಾನೇಜರ್ ಸೇರಿದಂತೆ 11 ಸಿಬ್ಬಂದಿ ಅಮಾನತುಗೊಂಡಿದ್ದಾರೆ. ಕೆ.ಆರ್.ಪೇಟೆ ಪಟ್ಟಣದ ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಎಚ್.ಎಸ್.ರವಿ, ಶ್ರೀನಿವಾಸ್ ಸೇರಿದಂತೆ 11 ಮಂದಿ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಎಸ್ಬಿಎಂ ಬ್ಯಾಂಕ್ನಲ್ಲಿ ಡಿಸಿಸಿ ಬ್ಯಾಂಕ್ನ ಖಾತೆಯಿದ್ದು, ಅದರಲ್ಲಿದ್ದ 74 ಲಕ್ಷ ರೂ. ಹಣವನ್ನು ನಂದೀಶ್ ಹೆಸರಿನ ಖಾತೆಗೆ ಮ್ಯಾನೇಜರ್ ರವಿ ವರ್ಗ ಮಾಡಿಕೊಂಡು ಪರಾರಿಯಾಗಿದ್ದಾರೆ.
ಬ್ಯಾಂಕ್ನ 9 ಮಂದಿ ಹಣ ದುರುಪಯೋಗ ಮಾಡಿಕೊಳ್ಳದಿದ್ದರೂ ಅಷ್ಟು ಮೊತ್ತದ ಚೆಕ್ಗಳನ್ನು ಸರಿಯಾಗಿ ಪರಿಶೀಲನೆ ನಡೆಸದೆ ಪಾಸ್ ಮಾಡಿದ ಆರೋಪದಲ್ಲಿ ಅಮಾನತುಗೊಂಡಿದ್ದಾರೆ. ಹಣ ದುರುಪಯೋಗ ಪಡಿಸಿಕೊಂಡಿರುವ ಮ್ಯಾನೇಜರ್ ರವಿ ಮತ್ತು ಶ್ರೀನಿವಾಸ್ ತಲೆ ಮರೆಸಿಕೊಂಡಿದ್ದಾರೆ. ಅಪೆಕ್ಸ್ ಬ್ಯಾಂಕ್ನ ಅಧಿಕಾರಿಗಳ ತಂಡ ಬ್ಯಾಂಕ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುರುಪಯೋಗವಾದ ಮೊತ್ತದ ಪೈಕಿ 28 ಲಕ್ಷ ರೂ. ಹಾಗೂ ರವಿಯಿಂದ 22 ಲಕ್ಷ ರೂ. ಹಣ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಎನ್ನಲಾಗಿದೆ. ಈ ಸಂಬಂಧ ಕೆ.ಆರ್.ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.