ಬೆಂಗಳೂರು: ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಮಂದಿ ಪ್ರಮುಖ ಆರೋಪಿಗಳನ್ನು ಸಿಐಡಿ ತನಿಖಾ ತಂಡ ಬಂಧಿಸಿದೆ.
ಬೆಂಗಳೂರಿನ ವಿಜಯನಗರದ ಕೇಂಬ್ರಿಜ್ ಕಾಲೇಜಿನ ದೈಹಿಕ ಶಿಕ್ಷಕ ಮಂಜುನಾಥ್, ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಅವರ ಆಪ್ತ ಕಾರ್ಯದರ್ಶಿ ಓಬಳ್ರಾಜ್ ಮತ್ತು ಲೋಕೋಪಯೋಗಿ ಇಲಾಖೆಯ ವ್ಯವಸ್ಥಾಪಕ ರುದ್ರಪ್ಪ ಬಂಧಿತ ಆರೋಪಿಗಳು.
ಮಂಜುನಾಥ್ ₹ 10 ಲಕ್ಷಕ್ಕೆ ಪ್ರಶ್ನೆಪತ್ರಿಕೆಯನ್ನು ರುದ್ರಪ್ಪನಿಗೆ ಮಾರಾಟ ಮಾಡಿದ್ದ ಎಂದು ಸಿಐಡಿ ಪೊಲೀಸರು ತಿಳಿಸಿದ್ದಾರೆ.
ಪಿಯುಸಿ ಓದುತ್ತಿರುವ ತನ್ನ ಮಗಳಿಗಾಗಿ ರುದ್ರಪ್ಪ ಮಂಜುನಾಥ್ ಮೂಲಕ ಪ್ರಶ್ನೆಪತ್ರಿಕೆಯನ್ನು ಖರೀದಿ ಮಾಡಿದ್ದ ಎನ್ನಲಾಗಿದೆ. ಪ್ರಶ್ನೆಪತ್ರಿಕೆ ಪಡೆದ ಬಳಿಕ ರುದ್ರಪ್ಪ ವಾಟ್ಸ್ಆ್ಯಪ್ ಮೂಲಕ ಪ್ರಶ್ನೆಗಳನ್ನು ಹಲವರಿಗೆ ಕಳಿಸಿದ್ದ. ಪ್ರಶ್ನೆಪತ್ರಿಕೆ ಖರೀದಿಗೆ ರುದ್ರಪ್ಪನ ಸಂಬಂಧಿಯಾದ ಓಬಳ್ರಾಜ್ ಕೂಡಾ ಸಹಕರಿಸಿದ್ದ ಎಂದು ಮೂಲಗಳು ತಿಳಿಸಿವೆ.