ಮಂಡ್ಯ: ಅಂತರ್ಜಾತಿ ಯುವಕನ ಜತೆ ಮದುವೆಯಾಗಿದ್ದ ಅಪ್ರಾಪ್ತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ತಿಮ್ಮನ ಹೊಸೂರು ಗ್ರಾಮದಲ್ಲಿ ಘಟಿಸಿದೆ. ಮೋಹನ್ ಎಂಬವರ ಪುತ್ರಿ ಮೋನಿಕಾ ಆತ್ಮಹತ್ಯೆಗೆ ಶರಣಾದ ಅಪ್ರಾಪ್ತೆ ಎಂದು ಹೇಳಲಾಗಿದೆ.
ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಈಕೆ ಗಾಂಧಿನಗರ ನಿವಾಸಿ ನರೇಂದ್ರಬಾಬು ಎಂಬವನ ಜತೆ ವಾರದ ಹಿಂದೆ ಪರಾರಿಯಾಗಿದ್ದಳು. ಈ ಬಗ್ಗೆ ತಂದೆ ಮೋಹನ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಗುರುವಾರ ಪೊಲೀಸರು ಆಕೆಯನ್ನು ಪತ್ತೆ ಮಾಡಿದಾಗ ಪ್ರೇಮ ಪ್ರಕರಣ ಬೆಳಕಿಗೆ ಬಂದಿತ್ತು. ಠಾಣೆಯಲ್ಲಿ ಆಕೆ ಪೋಷಕರ ಜತೆ ಹೋಗುವುದಾಗಿ ಹೇಳಿ ಹೋಗಿದ್ದು ಶನಿವಾರ ರಾತ್ರಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಮಾರ್ಯಾದೆ ಹತ್ಯೆ ನಡೆಸಲಾಗಿದೆ ಎಂಬ ಗುಮಾನಿಯಲ್ಲಿ ಮೃತಳ ಪೋಷಕರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.