ಬೆಂಗಳೂರು, ಏ.2- ಕಳಸಾ-ಬಂಡೂರಿ ಯೋಜನೆಗೆ ಉಂಟಾಗಿರುವ ತೊಡಕು ನಿವಾರಿಸುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರಮೋದಿಯವರು ಮಧ್ಯ ಪ್ರವೇಶ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕಳಸಾ-ಬಂಡೂರಿ ಯೋಜನೆ ಸಂಬಂಧ ವಿಧಾನಸೌಧದಲ್ಲಿ ಇಂದು ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿವಾದ ಬಗೆಹರಿಸಲು ಎರಡು ದಾರಿಗಳಿವೆ. ನ್ಯಾಯಮಂಡಳಿ ಮೂಲಕ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಳ್ಳಬೇಕು. ಮತ್ತೊಂದು ಪ್ರಧಾನಿಯವರು ಮಧ್ಯ ಪ್ರವೇಶ ಮಾಡಿ ತೊಡಕು ನಿವಾರಿಸಬೇಕು ಎಂದು ಹೇಳಿದರು.
ಪ್ರಧಾನಿ ನರೇಂದ್ರಮೋದಿಯವರು ಮುಕ್ತ ಮನಸ್ಸು ಮಾಡಿ ಮಧ್ಯ ಪ್ರವೇಶಿಸಿದರೆ ಕಳಸಾ-ಬಂಡೂರಿ ಯೋಜನೆ ವಿವಾದವನ್ನು ನ್ಯಾಯಮಂಡಳಿ ಹೊರಗೆ ಬಗೆಹರಿಸಿಕೊಳ್ಳುವ ಎಲ್ಲ ಸಾಧ್ಯತೆಗಳಿವೆ. ಈ ವಿಚಾರದಲ್ಲಿ ಅಗತ್ಯವಾದರೆ ನಾವು ಪ್ರಧಾನಿಯವರನ್ನು ಮತ್ತೆ ಭೇಟಿ ಮಾಡೋಣ ಎಂದು ಹೇಳಿದರು.ಪ್ರಧಾನಿಯವರ ಮೇಲೆ ಒತ್ತಡ ತರುವುದಲ್ಲದೆ ಮತ್ತೊಂದೆಡೆ ನ್ಯಾಯಮಂಡಳಿಯಲ್ಲೂ ವ್ಯಾಜ್ಯವನ್ನು ತ್ವರಿತವಾಗಿ ಇತ್ಯರ್ಥಪಡಿಸಿಕೊಳ್ಳಲು ಪ್ರಯತ್ನಿಸುವುದಾಗಿ ತಿಳಿಸಿದರು.
ನೆಲ, ಜಲ ಮತ್ತು ಭಾಷೆ ವಿಚಾರದಲ್ಲಿ ರಾಜಕೀಯ ಸಲ್ಲದು. ಈವರೆಗೆ ಯಾರೂ ರಾಜಕೀಯ ಮಾಡಿಲ್ಲ. ಎಲ್ಲ ಹಂತದಲ್ಲೂ ಪಕ್ಷಾತೀತ ಪ್ರಯತ್ನಗಳು ನಡೆದಿವೆ. ಈ ವಿಷಯದಲ್ಲೂ ಅದೇ ದಾರಿಯಲ್ಲೇ ಮುಂದುವರೆಯೋಣ ಎಂದು ತಿಳಿಸಿದರು.