ಕೋಲಾರ, ಏ.2- ನಗರದ ಹೊರ ವಲಯದ ಕುಂಟೆಯೊಂದರಲ್ಲಿ ಈಜಲು ತೆರಳಿದ್ದ ಮೂವರು ಸ್ನೇಹಿತರೂ ನೀರು ಪಾಲಾಗಿದ್ದು, ಇವರಲ್ಲಿ ಇಬ್ಬರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು. ಮುಳಬಾಗಿಲು ತಾಲ್ಲೂಕಿನ ವಾಸಿಂ ಅಕ್ರಂ(15), ಸಯ್ಯದ್ ಸಲಾವುದ್ದೀನ್(15) ಇವರಿಬ್ಬರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಾಗಿದ್ದು, ಮತ್ತು ಜುನೈದ್(12) 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಈ ಮೂವರೂ ನೀರು ಪಾಲಾಗಿದ್ದಾರೆ.
ನಿನ್ನೆ ಮಧ್ಯಾಹ್ನ ಈ ಮೂವರು ಬೈಕ್ನಲ್ಲಿ ಹೊರ ವಲಯದ ಕುಂಟೆಯೊಂದರಲ್ಲಿ ಈಜಲು ಹೋಗಿದ್ದಾರೆ. ಸಂಜೆಯಾದರೂ ಮನೆಗೆ ಬಾರದಿರುವುದನ್ನು ಗಮನಿಸಿದ ಪೋಷಕರು ಹುಡುಕಾಟ ನಡೆಸಿದ್ದಾರೆ.
ಕುಂಟೆಯೊಂದರ ಬಳಿ ಹುಡುಗರ ಶರ್ಟ್, ಪ್ಯಾಂಟ್, ಬೈಕ್, ಚೆಪ್ಪಲಿ ಇರುವುದನ್ನು ಗಮನಿಸಿದ ಸ್ಥಳೀಯರು ಸಮೀಪ ಹೋಗಿ ನೋಡಿದಾಗ ಯುವಕರ ಯಾವುದೇ ಸುಳಿವು ಸಿಗಲಿಲ್ಲ. ತಕ್ಷಣ ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಆಗಮಿಸಿ ಮಣ್ಣಿನಲ್ಲಿ ಹೂತುಕೊಂಡಿದ್ದ ಮೂವರ ಶವಗಳನ್ನು ರಾತ್ರಿ 10 ಗಂಟೆಯಲ್ಲಿ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ. ಸರ್ಕಲ್ ಇನ್ಸ್ಪೆಕ್ಟರ್ ರಾಮರೆಡ್ಡಿ, ಸಬ್ಇನ್ಸ್ಪೆಕ್ಟರ್ ಶಂಕರಪ್ಪ ಸ್ಥಳಕ್ಕೆ ಭೇಟಿ ನೀಡಿದ್ದರು. ಮುಳಬಾಗಿಲು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.