ಬೆಂಗಳೂರು:ರಾಜ್ಯ ಸರ್ಕಾರ ನಮ್ಮ ಪ್ರತಿಭಟನೆಗೆ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿರುವ ಡಿಕೆ ರವಿ ತಾಯಿ ಗೌರಮ್ಮ, ನ್ಯಾಯ ಸಿಗುವವರೆಗೂ ಹೋರಾಟ ಮಾಡುವುದಾಗಿ ಹೇಳುವ ಮೂಲಕ ತಮ್ಮ ಪಟ್ಟನ್ನು ಮುಂದುವರಿಸಿದ್ದಾರೆ. ಗೌರಮ್ಮ ಹೋರಾಟಕ್ಕೆ ಹಲವು ಸಂಘ ಸಂಸ್ಥೆಗಳು ಬೆಂಬಲ ನೀಡಿವೆ.
ದಕ್ಷ ಐಎಎಸ್ ಅಧಿಕಾರಿ ರವಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಆನಂದ್ ರಾವ್ ವೃತ್ತದ ಗಾಂಧಿ ಪ್ರತಿಮೆ ಬಳಿ ಡಿಕೆ ರವಿ ತಾಯಿ ಹಾಗೂ ಕುಟುಂಬಸ್ಥರು ನ್ಯಾಯಕ್ಕಾಗಿ ಆಗ್ರಹಿಸಿ ಧರಣಿ ನಡೆಸುತ್ತಿದ್ದಾರೆ. ಪ್ರತಿಭಟನೆ ವೇಳೆ ವಿಷ ಕುಡಿಯುವುದಾಗಿ ಬೆದರಿಸಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.
ಗುರುವಾರ ಬೆಳಗ್ಗೆ ರವಿ ತಾಯಿ ನಿತ್ರಾಣಗೊಂಡು ಅಸ್ವಸ್ಥರಾದ ಘಟನೆ ನಡೆಯಿತು. ಈ ಹಂತದಲ್ಲಿ ಧರಣಿ ಕೈಬಿಟ್ಟು ದೊಡ್ಡಕೊಪ್ಪಲು ಗ್ರಾಮಕ್ಕೆ ಹೋಗಲು ನಿರ್ಧರಿಸಿದ್ದರು.
ಆದರೆ ಇದೀಗ ತಮ್ಮ ಪಟ್ಟನ್ನು ಸಡಿಲಿಸದ ಗೌರಮ್ಮ, ಮಗ ಡಿಕೆ ರವಿಯ ಅಸ್ಥಿ ಪಂಜರ ಹೊರತೆಗೆದು ವಿಧಾನಸೌಧದ ಎದುರು ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಏತನ್ಮಧ್ಯೆ ಹೋರಾಟ ನಡೆಸಲು ಅನುಮತಿ ಕೊಟ್ಟಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಎನ್ ಎಸ್ ಮೇಘರಿಕ್ ತಿಳಿಸಿದ್ದಾರೆ.
-ಉದಯವಾಣಿ