ಬೆಂಗಳೂರು: ಈ ವಾರ ಬಿಗ್ಬಾಸ್ ಮನೆಯಿಂದ ರವಿ ಮುರೂರ್ ಹೊರಬಂದ ಮೇಲೆ, ರೆಹಮಾನ್ ದುಡ್ಡಿಗಾಗಿಯೇ ಬಿಗ್ಬಾಸ್ ಮನೆ ಪ್ರವೇಶಿಸಿದ್ದು ಎಂದು ನಟ ಸುದೀಪ್ ಅವರ ಮುಂದೆ ಹೇಳಿದ್ದಾರೆ.
ದಿನದಿಂದ ದಿನಕ್ಕೆ ಬಿಗ್ ಬಾಸ್ ಮನೆಯಲ್ಲಿ ರೆಹಮಾನ್ ಒಂದಲ್ಲ ಒಂದು ಕಾರಣದಿಂದ ವಿವಾದಕ್ಕೆ ಆಸ್ಪದವಾಗುತ್ತಿದ್ದಾರೆ. ಇಷ್ಟು ದಿನ ಜನರು ರೆಹಮಾನ್ರನ್ನು ಗೆಲ್ಲುವ ಕುದುರೆ ಎಂದು ಭಾವಿಸಿದ್ದರು. ಆದರೆ ಸುದೀಪ್ ರವಿ ಅವರಿಗೆ ಮನೆಯ ಇತರ ಸ್ಪರ್ಧಿಗಳ ಬಗ್ಗೆ ತಮ್ಮ ಅನಿಸಿಕೆಯನ್ನು ಬರೆಯಬೇಕು ಎಂದಾಗ ಅವರು ಕೃತಿಕಾಗೆ `ಒಳಗೊಂದು ಹೊರಗೊಂದು’ ಎಂದು ಬರೆದರು. ಹಾಗೆ ಮಾಸ್ಟರ್ ಆನಂದ್ಗೆ ಕುಚಿಕು ಎಂದು, ಶೃತಿ ಅವರಿಗೆ `ಅಕ್ಕ ಅಮ್ಮ’ ಎಂದು ಒಳ್ಳೆಯ ಅನಿಸಿಕೆ ನೀಡಿದರು.
ರೆಹಮಾನ್ರನ್ನು ಕುರಿತು “ಕುರುಡು ಕಾಂಚಾಣ” ಎಂದು ಬರೆದು, ಸುದೀಪ್ ಅದಕ್ಕೆ ಕಾರಣ ಕೇಳಿದಾಗ ರವಿ, ನಾನು ಗೆಲ್ತೀನೋ ಇಲ್ವೋ ಗೊತ್ತಿಲ್ಲ ಆದರೆ ದುಡ್ಡಿನ ಅವಶ್ಯಕತೆ ಇದ್ದಿದ್ದರಿಂದ ಬಿಗ್ಬಾಸ್ಗೆ ಬಂದೆ ಎಂದು ರೆಹಮಾನ್ ನನ್ನ ಎದುರಲ್ಲೇ ಹೇಳಿದ್ದರು ಎಂಬ ವಿಷಯವನ್ನು ಬಹಿರಂಗಪಡಿಸಿದರು.
ಮೊದಲು ಹುಚ್ಚ ವೆಂಕಟ್ರನ್ನು ಎದುರುಹಾಕಿಕೊಂಡ ರೆಹಮಾನ್ ನಂತರದ ದಿನಗಳಲ್ಲಿ ನೇಹಾರೊಂದಿಗಿನ ತಮ್ಮ ಬಾಂಧವ್ಯದ ವಿಷಯವಾಗಿ ಅಪಾರ ಚರ್ಚೆಗೆ ಒಳಗಾದರು. ಈಗ ರವಿ ಮುರೂರ್ ರೆಹಮಾನ್ ಬಗ್ಗೆ ಹೇಳಿರುವುದು ಕೂಡ ಗಂಭೀರವಾದ ವಿಷಯವೇ.
ಇಷ್ಟೆಲ್ಲಾ ನಡೆಯುತ್ತಿರುವಾಗ, ಹುಚ್ಚ ವೆಂಕಟ್ ಅಭಿಮಾನಿಗಳು ರೆಹಮಾನ್ ಮೇಲೆ ಕಿಡಿ ಕಾರುತ್ತಿದ್ದರೆ, ರೆಹಮಾನ್ ಅಭಿಮಾನಿಗಳು ಮಾತ್ರ ಅವರು ಗೆಲ್ಲಲಿ ಎಂದೇ ಆಶಿಸುತ್ತಿದ್ದಾರೆ.