ಹುಬ್ಬಳ್ಳಿ: ಮಾನನಷ್ಟ ಮೊಕದಮ್ಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಹುಬ್ಬಳಿಯ 2ನೇ ಜೆಎಂಎಫ್ಸಿ ಕೋರ್ಟ್ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
2004ರ ಚುನಾವಣೆ ವೇಳೆ ಕನ್ನಡ ನಾಡು ಪಕ್ಷದ ಮುಖ್ಯಸ್ಥರಾಗಿದ್ದ ಮಾಜಿ ಸಂಸದ ವಿಜಯ್ ಸಂಕೇಶ್ವರ್ ಅವರ ವಿರುದ್ಧ ಯತ್ನಾಳ್ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಂಕೇಶ್ವರ್ ಅವರು ಯತ್ನಾಳ್ ವಿರುದ್ಧ ಮಾನನಷ್ಟ ಮೊಕದಮ್ಮೆ ಹೂಡಿದ್ದರು.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಕೋರ್ಟ್ ಇಂದು ಯತ್ನಾಳ್ ಅವರಿಗೆ ಆರು ತಿಂಗಳ ಜೈಲು ಶಿಕ್ಷೆ ನೀಡಿದೆ. ಆದರೆ ಪ್ರಕರಣ ಸಂಬಂಧ ಯತ್ನಾಳ್ ಅವರು ಈಗಾಗಲೇ ಜಾಮೀನು ಪಡೆದುಕೊಂಡಿದ್ದಾರೆ.
‘ಕನ್ನಡ ನಾಡು ಪಕ್ಷ ಕಟ್ಟಲು ನಾನು ದುಡ್ಡು ಕೊಟ್ಟಿದ್ದೇನೆ. ಆ ಪಕ್ಷಕ್ಕೆ ಶಿವಗಣಾರಾಧನೆ ಮಾಡಬೇಕು’ ಎಂದು ಸುದ್ದಿಗೋಷ್ಠಿಯಲ್ಲಿ ಯತ್ನಾಳ್ ಆರೋಪಿಸಿದ್ದರು.