ಬೆಂಗಳೂರು: ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಸೇರಿದಂತೆ ಒಟ್ಟು 50 ಪ್ರಭಾವಿ ನಾಯಕರು ಸುಮಾರು 177 ಎಕರೆ ಅರಣ್ಯ ಭೂಮಿ ಒತ್ತುವರಿ ಮಾಡಿದ್ದಾರೆ ಎಂದು ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸೋಮವಾರ ಆರೋಪಿಸಿದ್ದಾರೆ.
ಈ ಕುರಿತು ಇಂದು ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ದಾಖಲೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಎಚ್ಡಿಕೆ, ಸಚಿವ ಆರ್.ವಿ.ದೇಶಪಾಂಡೆ, ಶೋಭಾ ಡವಲಪರ್ಸ್ ಮಂತ್ರಿ ಡವಲಪರ್ಸ್ ಹಾಗೂ ಕೆಲವು ಅಧಿಕಾರಿಗಳು ಸೇರಿದಂತೆ 50ಕ್ಕೂ ಹೆಚ್ಚು ಪ್ರಭಾವಿಗಳು ಜಕ್ಕೂರು ಅಳ್ಳಾಲಸಂದ್ರದಲ್ಲಿ ಸುಮಾರಿ 14 ಸಾವಿರ ಕೋಟಿ ಮೌಲ್ಯದ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾಕತ್ತಿದ್ದರೆ ಜಮೀನು ಹಿಂಪಡೆಯಲಿ. ಇಲ್ಲದಿದ್ದರೆ ಸಿಎಂ ಭೂಗಳ್ಳರ ಭಾಗ್ಯ ಪ್ರಕಟಿಸಲಿ ಎಂದು ಕುಮಾಸ್ವಾಮಿ ಸವಾಲು ಹಾಕಿದರು. ಅಲ್ಲದೆ ಭೂಗಳ್ಳರ ವಿರುದ್ಧ ಹೋರಾಟಕ್ಕೆ ಕೈಜೋಡಿಸುವಂತೆ ಕನ್ನಡಪರ ಸಂಘಟನೆಗಳಿಗೆ ಹಾಗೂ ಇತರೆ ಸಂಘ ಸಂಸ್ಥೆಗಳಿಗೆ ಪತ್ರ ಬರೆಯುವುದಾಗಿ ಮಾಜಿ ಸಿಎಂ ತಿಳಿಸಿದರು.
ಇದೇ ವೇಳೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಎಚ್ಡಿಕೆ, ಅಧಿವೇಶನದಲ್ಲಿ ಇಂಥ ವಿಷಯ ಮಂಡನೆಗೆ ಸ್ಪೀಕರ್ ಅವಕಾಶ ನೀಡಲಿಲ್ಲ. ಹೀಗಾಗಿ ಇದನ್ನೆಲ್ಲ ಸುದ್ದಿಗೋಷ್ಠಿಯಲ್ಲಿ ಹೇಳಬೇಕಾಗಿದೆ ಎಂದರು.