ಬೆಂಗಳೂರು, ಸೆ.18- ಪರಪ್ಪನ ಅಗ್ರಹಾರದಲ್ಲಿರುವ ಕಾರಾಗೃಹದಲ್ಲಿ ಇಂದು ಬೆಳಗ್ಗೆ ಗಣೇಶಪೂಜೆ ವಿಷಯಕ್ಕೆ ವಿಚಾರಣಾಧೀನ ಕೈದಿಗಳ ನಡುವೆ ನಡೆದ ಮಾರಾಮಾರಿ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ.
ಇಂದು ಬೆಳಗ್ಗೆ 9.30ರ ಸುಮಾರಿನಲ್ಲಿ ಕಾರಾಗೃಹದಲ್ಲಿ ಖೈದಿಗಳನ್ನು ತಿಂಡಿಗೆ ಬಿಟ್ಟಿದ್ದಾಗ ಗಣೇಶನ ಪೂಜೆ ವಿಚಾರವಾಗಿ ಖೈದಿಗಳ ನಡುವೆ ಜಗಳವಾಗಿದೆ. ಈ ಜಗಳ ವಿಕೋಪಕ್ಕೆ ತಿರುಗಿ ಕೈ ಕೈಮಿಲಾಯಿಸಿಕೊಂಡಿದ್ದು, ಗಣೇಶ್ ಎಂಬ ಖೈದಿ ಮೇಲೆ ಪ್ರಭು, ಭರತ, ಪ್ರಕಾಶ ಎಂಬುವವರು ಹಲ್ಲೆ ಮಾಡಿ ಕೆಳಕ್ಕೆ ತಳ್ಳಿದ್ದಾರೆ ಕೆಳಗೆ ಬಿದ್ದ ಗಣೇಶ್ ಗಾಯಗೊಂಡು ಮೃತಪಟ್ಟಿದ್ದಾನೆ.
ಮೃತಪಟ್ಟಿರುವ ಗಣೇಶ್ ವಿಚಾರಣಾಧೀನ ಕೈದಿಯಾಗಿದ್ದು, ತುಮಕೂರು ಜಿಲ್ಲೆಯ ಸಿ.ಎಸ್ಪುರ ಗ್ರಾಮದವನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಡಲಾಗಿದೆ. ಈ ಸಂಬಂಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.