ಬೆಂಗಳೂರು, ಸೆ.11: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಚಂದ್ರಾಪುರ ಮಠದ ಸ್ವಾಮೀಜಿ ರಾಘವೇಶ್ವರ ಶ್ರೀಯವರನ್ನು ಇಂದು ಸಿಐಡಿ ಪೊಲೀಸರು ಕಚೇರಿಗೆ ಕರೆಸಿಕೊಂಡು ವಿಚಾರಣೆ ನಡೆಸಿರುವುದು ವರದಿಯಾಗಿದೆ.
ರಾಘವೇಶ್ವರ ಶ್ರೀಗಳು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರಿಂದ ಸಿಐಡಿ ಎಸ್ಪಿ ಸಿರಿಗೌರಿ ನೇತೃತ್ವದ ತಂಡ ಶ್ರೀಗಳನ್ನು ಇಂದು ಸಿಐಡಿ ಕಚೇರಿಗೆ ಕರೆಸಿಕೊಂಡು ಸುಮಾರು ಒಂದೂವರೆ ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿತು. ವಿಚಾರಣೆಗೆ ಒಳಪಡಿಸುವ ಮುನ್ನವೇ ಸ್ವಾಮೀಜಿ ನಿರೀಕ್ಷಣಾ ಜಾಮೀನು ಪಡೆದಿದ್ದರಿಂದ ಸಿಐಡಿ ಪೊಲೀ ಸರು ವಿಚಾರಣೆಗೆ ಒಳಪಡಿಸಿದ ನಂತರ 5 ಲಕ್ಷ ರೂ. ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ಪಡೆದು ಷರತ್ತುಬದ್ಧ ಜಾಮೀನಿನಲ್ಲಿ ಅವರನ್ನು ಬಿಡುಗಡೆಗೊಳಿಸಿದರು.
ಪ್ರೇಮಲತಾ ಎಂಬವರು ದಾಖಲಿಸಿದ್ದ ಅತ್ಯಾಚಾರ ಆರೋಪದ ಮೇಲೆ ಸಿಐಡಿ ಅಧಿಕಾರಿಗಳು ರಾಘವೇಶ್ವರ ಸ್ವಾಮೀಜಿಯವರನ್ನು ವಿಚಾರಣೆ ನಡೆಸಿದ್ದರು. ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆಗೆ ಬಂದ ಹೊಸನಗರದ ಯುವತಿಯೊಬ್ಬಳು ರಾಘವೇಶ್ವರ ಭಾರತೀಶ್ರೀ ತನ್ನ ಮೇಲೆ 2006ರಿಂದ ನಿರಂತರವಾಗಿ ಅತ್ಯಾಚಾರವೆಸಗಿದ್ದಾರೆ ಎಂದು ಮತ್ತೊಂದು ದೂರು ದಾಖಲಿಸಿದ್ದಳು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಂದಿನ ದಿನಗಳಲ್ಲಿ ಶ್ರೀಗಳ ವೈದ್ಯಕೀಯ ಪರೀಕ್ಷೆಯನ್ನು ನಡೆಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.