ಬೆಂಗಳೂರು, ಸೆ.5: ಲೈಂಗಿಕ ದೌರ್ಜ ನ್ಯವೆಸಗಿದ ಆರೋಪಕ್ಕೆ ಗುರಿಯಾಗಿ ರುವ ರಾಮಚಂದ್ರಾಪುರ ಮಠದ ರಾಘ ವೇಶ್ವರ ಸ್ವಾಮೀಜಿ ತಕ್ಷಣ ಪೀಠ ತ್ಯಜಿಸಿ ಕಾನೂನು ಕ್ರಮ ಎದುರಿಸಬೇಕು ಎಂದು ಹವ್ಯಕ ಬ್ರಾಹ್ಮಣ ಸಮುದಾಯದ ಮುಖಂಡರು ಒತ್ತಾಯಿಸಿದ್ದಾರೆ.
ನಗರದ ಪ್ರೆಸ್ಕ್ಲಬ್ನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಮುದಾಯದ ಮುಖಂಡ ಗಣೇಶ್ ಭಟ್, ರಾಮಕಥಾ ಕಲಾವಿದೆ ಪ್ರೇಮಲತಾ ದಿವಾಕರ್ ನೀಡಿರುವ ಲೈಂಗಿಕ ದೌರ್ಜನ್ಯ ದೂರಿನ ಪ್ರಕರಣ ನ್ಯಾಯಾಲಯದಲ್ಲಿದೆ.
ಇಂತಹ ಸಂದರ್ಭದಲ್ಲಿ ಸ್ವಾಮೀಜಿ ನೈತಿಕ ದೃಷ್ಟಿಯಿಂದ ಪೀಠದಲ್ಲಿ ಕೂರುವುದು, ಮಠದಲ್ಲಿ ಮುಂದುವರಿಯುವುದು ಸರಿಯಲ್ಲ ಎಂದು ಹೇಳಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮೀಜಿ ತನ್ನ ಪ್ರಭಾವ ಬಳಸಿ ದೂರುದಾರರ ಮೇಲೆ ಒತ್ತಡ ಹೇರುತ್ತಿದ್ದಾರೆ. ಪ್ರಕರಣ ತನಿಖೆ ನಡೆಸುತ್ತಿರುವ ಹೈಕೋರ್ಟ್ನ ನ್ಯಾಯಮೂರ್ತಿಗಳು ತಮ್ಮ ಮೇಲೆ ಆರೋಪ ಕೇಳಿ ಬಂದ ಕೂಡಲೇ ತನ್ನ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ ಎಂದು ಆರೋಪಿಸಿದ ಅವರು, ಲೈಂಗಿಕ ಅತ್ಯಾಚಾರ, ಅನಾಚಾರದಂತಹ ಆರೋಪ ಕೇಳಿಬಂದಾಗ ಸದ್ಧರ್ಮ ಪರಿಪಾಲನೆ ದೃಷ್ಟಿಯಿಂದ ಸ್ವಾಮೀಜಿ ಅವರು ತಾತ್ಕಾಲಿಕವಾಗಿಯಾದರೂ ಪೀಠದಿಂದ ನಿರ್ಗಮಿಸಿ ತನಿಖೆಗೆ ಸಹಕರಿಸಬೇಕು ಎಂದು ಒತ್ತಾಯಿಸಿದರು.
ತಮ್ಮ ಮೇಲೆ ಅತ್ಯಾಚಾರದ ಆರೋಪ ಬರುತ್ತದೆ ಎಂಬ ಪೂರ್ವಕಲ್ಪನೆಯಿಂದ ಮೊದಲೇ ಸಂತ್ರಸ್ತೆ ಮಹಿಳೆಯ ಮೇಲೆ ಬ್ಲಾಕ್ಮೇಲ್ ಕೇಸು ಹಾಕಿ ಜೈಲಿಗಟ್ಟಿದರು ಎಂದು ಆರೋಪಿಸಿದ ಅವರು, ಇದು ದಮನಕಾರಿ ನೀತಿಯಾಗಿದ್ದು, ಈ ಮಧ್ಯೆ ಶಾಮಾಶಾಸ್ತ್ರಿ ಅವರ ಮೇಲೆ ಒತ್ತಡ, ಬೆದರಿಕೆ ಹಾಕಿ ಅವರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಲಾಗಿದೆ ಎಂದು ದೂರಿದರು.
ಮಠದಲ್ಲಿ ಹೆಣ್ಣು ಮಕ್ಕಳಿಗೆ ಸಂಸ್ಕಾರ ಕೊಡುವ ಕನ್ಯಾ ಸಂಸ್ಕಾರ ಮುಂತಾದ ಕಾರ್ಯಕ್ರಮಗಳಲ್ಲಿ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ. ಏಕಾಂತ ಸೇವೆ ಹೆಸರಿನಲ್ಲಿ ಹೆಣ್ಣು ಮಕ್ಕಳು, ಮಹಿಳೆಯರು, ವಿಧವೆಯರು ಮುಂತಾದ ಅಸಹಾಯಕರನ್ನು ಲೈಂಗಿಕವಾಗಿ ಶೋಷಣೆ ಮಾಡಲಾಗುತ್ತಿದೆ ಎಂದು ಅವರು ಇದೇ ವೇಳೆ ಆರೋಪಿಸಿದರು.
ಗೋಷ್ಠಿಯಲ್ಲಿ ಸಮುದಾಯದ ಮುಖಂಡರಾದ ಅಶ್ವಿನ್ ಕುಮಾರ್ ಸಾಗರ, ಸುಧಾಕರ್ ಸುಳ್ಯ, ಮಹಾಬಲಿಗಿರಿ ಹೆಗಡೆ ಮತ್ತು ಇತರರು ಭಾಗವಹಿಸಿದ್ದರು.
ಮಠದ ಹಣ ದುರುಪಯೋಗ
ಮಠದಲ್ಲಿ ಭ್ರಷ್ಟಾಚಾರವು ತಾಂಡವ ವಾಡುತ್ತಿದ್ದು, ಮಠಕ್ಕೆ ಸಂದಾ ಯವಾಗಿರುವ ಹಣಕ್ಕೆ ಸೂಕ್ತ ಲೆಕ್ಕ ಪತ್ರ ನೀಡುವ ವ್ಯವಸ್ಥೆಯನ್ನು ಮಾಡಿಲ್ಲ. ಭಕ್ತಿಯ ಹೆಸರಿನಲ್ಲಿ ಸುಲಿಗೆ ಮಾಡಿರುವ ಹಣದಲ್ಲಿ ಶ್ರೀಗಳ ಬಂಧುಗಳ ಹೆಸರಿನಲ್ಲಿ ಖಾಸಗಿ ಕಂಪನಿಗಳ ಷೇರು, ಇನ್ಸುರೆನ್ಸ್, ಫ್ಲಾಟ್ಗಳು, ಜಮೀನುಗಳನ್ನು ಅಕ್ರಮವಾಗಿ ಖರೀದಿ ಮಾಡಲಾಗಿದೆ. ಮಠದಲ್ಲಿನ ಹಣಕಾಸು ವ್ಯವಹಾರಗಳನ್ನು ಕಾನೂನಾತ್ಮಕವಾಗಿ ಸೂಕ್ತ ತನಿಖೆ ಮಾಡಬೇಕೆಂದು ಡಾ.ಟಿ.ಹೆಗಡೆ ಕುಮಟಾ ಒತ್ತಾಯಿಸಿದರು.