ಬೆಂಗಳೂರು, ಆ. 31: ಹಿರಿಯ ನಟ ಶಿವರಾಜ್ಕುಮಾರ್-ಗೀತಾ ದಂಪತಿಯ ಹಿರಿಯ ಪುತ್ರಿ ಡಾ.ನಿರುಪಮಾ ವಿವಾಹ ಡಾ. ದಿಲೀಪ್ ಅವರೊಂದಿಗೆ ಗಣ್ಯಾತಿಗಣ್ಯರ ಸಮ್ಮುಖದಲ್ಲಿಂದು ಅದ್ದೂರಿಯಾಗಿ ನೆರವೇರಿತು.
ನಗರದ ಅರಮನೆ ಮೈದಾನದಲ್ಲಿ ನಡೆದ ಶಿವಣ್ಣನ ಮಗಳ ಮದುವೆಯಲ್ಲಿ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಸೇರಿದಂತೆ ಸ್ಯಾಂಡಲ್ವುಡ್,ಟಾಲಿವುಡ್,ಕಾಲಿವುಡ್ ಸೇರಿದಂತೆ ವಿವಿಧ ಭಾಷೆಯ ನಟ ನಟಿಯರು ರಾಜಕೀಯ ನಾಯಕರು ಭಾಗವಹಿಸಿ ನವ ದಂಪತಿಗಳಿಗೆ ಶುಭಹಾರೈಸಿದರು.
ಡಾ.ರಾಜ್ಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಮೊಮ್ಮೊಗಳ ಮದುವೆಯ ಕ್ಷಣ ಎರಡು ಕುಟುಂಬಗಳಲ್ಲಿ ಹಬ್ಬದ ವಾತಾವರಣ,ಸಂಭ್ರಮ ಸಡಗರ ಮುಗಿಲು ಮುಟ್ಟಿತ್ತು.ಮಂಡ್ಯ ಮೂಲದ ಹೆಚ್.ಎಸ್.ಆರ್ ಬಡಾವಣೆಯಲ್ಲಿರುವ ಡಾ.ದಿಲೀಪ್ ಹಾಗು ನಿರುಪಮಾ ಎಂಬಿಬಿಎಸ್ ಪದವಿ ವ್ಯಾಸಂಗ ಮಾಡುತ್ತಿರುವಾಗಿನಿಂದ ಪರಿಚಯ. ಅದು ಸ್ನೇಹವಾಗಿ ಇಂದು ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದು ಹೊಸ ಬಾಳಿಗೆ ಅಡಿಯಿಟ್ಟರು.
ಅಜ್ಜಿ ಪಾರ್ವತಮ್ಮ ರಾಜ್ಕುಮಾರ್, ಚಿಕ್ಕಪ್ಪಂದಿರಾದ ರಾಘವೇಂದ್ರ ರಾಜ್ಕುಮಾರ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಇಡೀ ಕುಟುಂಬದ ಸದಸ್ಯರು ಹಾಗು ಕೇಂದ್ರ ಸಚಿವರಾದ ಅನಂತ್ ಕುಮಾರ್, ಡಿ.ವಿ ಸದಾನಂದಗೌಡ, ಮುಖ್ಯಮಂತ್ರಿ ಎಸ್.ಎಂ. ಕೃಷ್ಣ,ರಾಜ್ಯದ ಸಚಿವರಾದ ಡಿ.ಕೆ ಶಿವಕುಮಾರ್ ಸೇರಿದಂತೆ ರಾಜಕೀಯ ಹಾಗು ಚಿತ್ರರಂಗದ ಘಟಾನುಘಟಿಗಳು ಹಿರಿಯ ಕಿರಿಯ ನಟ-ನಟಿಯರು ಸಂಭ್ರಮದಲ್ಲಿ ಭಾಗವಹಿಸಿದ್ದರು.
ಮದುವೆಗೆ ಆಗಮಿಸಿದ್ದ ಗಣ್ಯಾತಿ ಗಣ್ಯರನ್ನು ಖುದ್ದು ಶಿವರಾಜ್ ಕುಮಾರ್ ಸ್ವಾಗತಿಸಿ ವಧುವರರಿಗೆ ಪರಿಚಯ ಮಾಡಿಕೊಟ್ಟರು.
ಮದುವೆಯ ಕ್ಷಣಗಳನ್ನು ಕಣ್ಣುತುಂಬಿಕೊಳ್ಳಲು ಹಾಗು ವಧುವರರನ್ನು ಹರಸಲು ರಾಜ್ಕುಮಾರ್ ಅವರ ಹುಟ್ಟಿದೂರು ಗಾಜನೂರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಕುಟುಂಬದ ಸದಸ್ಯರು, ಅಭಿಮಾನಿಗಳು ಆಗಮಿಸಿದ್ದರು. ಅಲ್ಲದೆ ತಮ್ಮ ಮನೆಯಲ್ಲಿ ನಡೆಯುತ್ತಿರುವ ಮದುವೆ ಎಂಬಂತೆ ಸಂಭ್ರಮಿಸಿದರು.
ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು, ನಿರ್ಮಾಪಕರುಗಳಾದ ರಾಕ್ಲೈನ್ ವೆಂಕಟೇಶ್, ಮಹದೇವ್, ಚಿನ್ನೇಗೌಡ, ನಟ ನಟಿಯರಾದ ಉಪೇಂದ್ರ, ಸುದೀಪ್, ಗಣೇಶ್, ಜಯಂತಿ, ತಾರಾ, ಎಡಕಲ್ಲುಗುಡ್ಡದ ಚಂದ್ರಶೇಖರ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
ವಧು ವರರನ್ನು ಹರಸಲು ಅಭಿಮಾನಿಗಳು ಅರಮನೆ ಮೈದಾನದಲ್ಲಿ ತುಂಬಿ ತುಳುಕಾಡಿದ್ದರಿಂದ ನೂಕು ನುಗ್ಗಲು ಉಂಟಾಗಿತ್ತು.
ಸಂಜೆ ಆರತಕ್ಷತೆ
ಸಂಜೆ ನಗರದಲ್ಲಿ ಅರಮನೆ ಮೈದಾನದಲ್ಲಿ ಆರತಕ್ಷತೆ ನಡೆಯಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಸಂಪುಟದ ಅನೇಕ ಸದಸ್ಯರು, ಬಾಲಿವುಡ್ ನಟರಾದ ಅಮಿತಾ ಬಚ್ಚನ್, ಸೂಪರ್ ಸ್ಟಾರ್ ರಜಿನಿಕಾಂತ್ ಸೇರಿದಂತೆ ಕನ್ನಡ, ತೆಲುಗು ಮತ್ತು ತಮಿಳು ಚಿತ್ರರಂಗದ ನಟ-ನಟಿಯರು ಭಾಗಿಯಾಗಲಿದ್ದಾರೆ.
ತ್ರಿಪುರವಾಸಿಯಲ್ಲಿ 10 ಸಾವಿರ ಮಂದಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿದೆ.ಅಲ್ಲದೆ 5 ರಿಂದ 10 ಸಾವಿರ ಮಂದಿ ಏಕಕಾಲದಲ್ಲಿ ಕುಳಿತ ಊಟ ಮಾಡುವ ವ್ಯವಸ್ಥೆ ಮಾಡುವ ಅವಕಾಶ ಕಲ್ಪಿಸಲಾಗಿದೆ.
ಮದುವೆಗೆ ಬರುವ ಗಣ್ಯಾತಿ ಗಣ್ಯರಿಗೆ ಸಿನಿಮಾ ನಟರಿಗೆ ಅನುಕೂಲವಾಗಲೆಂದು 10 ಕ್ಯಾರಾವಾನ್ಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಅಭಿಮಾನಿಗಳನ್ನು ನಿಯಂತ್ರಿಸಲು ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಮದುವೆಗೆ ಬಂದವರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾವನ್ನೂ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು. ಗಣ್ಯರು, ಅತಿಗಣ್ಯರು ಮಾಧ್ಯಮದವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.
(ಚಿತ್ರ ಕೃಪೆ: ಈ ಸಂಜೆ)