ಕೆಜಿಎಫ್, ಆ.29: ಕಳೆದ 20 ದಿನಗಳಿಂದ ತಾಲೂಕಿನಲ್ಲಿ ಬೆಸ್ಕಾಂ ಇಲಾಖೆ ಅನಿಮಿಯತವಾಗಿ ವಿದ್ಯುತ್ ಕಡಿತ ಮಾಡುತ್ತಿರುವುದನ್ನು ಖಂಡಿಸಿ ನಗರಸಭೆ ಅಧ್ಯಕ್ಷ ಎಂ.ಭಕ್ತವತ್ಸಲಂ, ಮಾಜಿ ಶಾಸಕ ಎಸ್.ರಾಜೇಂದ್ರನ್ ನೇತೃತ್ವದಲ್ಲಿ ಕರೆ ನೀಡಿದ್ದ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೆಜಿಎಫ್ ಬಂದ್ ಹಿನ್ನೆಲೆಯಲ್ಲಿ ವಾಣಿಜ್ಯ, ಸಾರಿಗೆ ವಾಹಿವಾಟು ಸ್ತಬ್ಧ್ದಗೊಂಡಿತ್ತು ಹಾಗೂ ಬಿಇಎಂಎಲ್ ಕಾರ್ಮಿಕರು ಕೆಲಸವನ್ನು ಸ್ಥಗಿತಗೊಳಿಸಿ ಬಂದ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ರಾಬರ್ಟ್ಸನ್ಪೇಟೆ ಹಾಗೂ ಆಂಡ್ರಸನ್ಪೇಟೆ ಬಸ್ ನಿಲ್ದಾಣದಲ್ಲಿ ಕೆಎಸ್ಸಾರ್ಟಿಸಿ ಹಾಗೂ ಖಾಸಗಿ ಬಸ್ಗಳು ರಸ್ತೆಗೆ ಇಳಿಯದಿದ್ದರಿಂದ ಬಸ್ ನಿಲ್ದಾಣ ಎಂ.ಜಿ.ಮಾರುಕಟ್ಟೆ ಅವರಣ,ಪ್ರಮುಖ ರಸ್ತೆಗಳು ಬಿಕೋ ಅನ್ನುತ್ತಿತ್ತು .
ತಾಲೂಕಿನ ಆಂಡ್ರಸನ್ಪೇಟೆಯ ವ್ಯಾಪಾರಿಗಳು, ಎಂ.ಜಿ.ಮಾರುಕಟ್ಟೆ ವ್ಯಾಪಾರಿಗಳು, ಒಂದನೆ ಅಡ್ಡ ರಸ್ತೆಯಲ್ಲಿನ ಜ್ಯುವೆಲ್ಲರ್ಸ್ ಅಂಗಡಿಗಳ ಬಾಗಿಲು ಮುಚ್ಚಿದ್ದು, ಶಾಲಾ ಕಾಲೇಜುಗಳು, ವಿಶ್ವಕರ್ಮ ಸಂಘ, ಆಟೊ ಚಾಲಕರ ಸಂಘ, ಜೀವವಿಮಾ ನಿಗಮ, ನಗರಸಭೆೆ ಕಾರ್ಯಾಲಯ, ನಾಡ ಕಚೇರಿ ಬ್ಯಾಂಕ್, ಅಂಚೆ ಕಚೇರಿಗಳಲ್ಲಿ ಸಿಬ್ಬಂದಿ ಕಾರ್ಯ ನಿರ್ವಹಿಸದೇ ಬಂದ್ಗೆ ಬೆಂಬಲ ವ್ಯಕ್ತಪಡಿಸಿದರು.
ಬಂದ್ನಲ್ಲಿ ಪಕ್ಷಾತೀತವಾಗಿ ಭಾಗವಹಿಸಿದ, ಸಾರ್ವಜನಿಕರು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಬೆಸ್ಕಾಂ ಇಲಾಖೆಯ ಧೋರಣೆಯನ್ನು ಖಂಡಿಸಿದರು.
ಈ ಸಂದರ್ಭದಲ್ಲಿ ಯಾವುದೇ ಅಹಿಕತರ ಘಟನೆಗಳು ನಡೆಯದಂತೆ ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಆರ್.ಭಗವನ್ದಾಸ್ ಸೂಚನೆಯಂತೆ ಡಿವೈಎಸ್ಪಿ ಪುಟ್ಟಮಾದಯ್ಯ ಮುನ್ನೆಚ್ಚರಿಕೆ ಕ್ರಮವಾಗಿ ನಗರದ ಆಯಕಟ್ಟಿನ ಸ್ಥಳಗಳಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.