ಬಳ್ಳಾರಿ: ಬಳ್ಳಾರಿ: 15 ಸಾವಿರ ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿದ ಆರೋಪದ ಮೇಲೆ ಬಳ್ಳಾರಿ ನಗರ ಕಾಂಗ್ರೆಸ್ ಶಾಸಕ ಅನಿಲ್ ಲಾಡ್ ಅವರನ್ನು ಸಿಬಿಐ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ. ಬೆಂಗಳೂರಿನ ಸಿಬಿಐ ಅಧಿಕಾರಿಗಳು ಅನಿಲ್ ಲಾಡ್ ಅವರನ್ನು ತನಿಖೆ ಸಲುವಾಗಿ ಸಿಬಿಐ ಕಚೇರಿಗೆ ಕರೆಸಿಕೊಂಡು ಬಂಧಿಸಿದರು.
2012ರಲ್ಲಿ ಮಲ್ಲಿಕಾರ್ಜುನ್ ಶಿಪ್ಪಿಂಗ್ ಪ್ರೈ. ಲಿಮಿಟೆಡ್ ಕಂಪನಿ ಮೂಲಕ 15 ಸಾವಿರ ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಬೇಲಕೇರಿ ಬಂದರಿನ ಮೂಲಕ ರಫ್ತು ಮಾಡಿದ ಆರೋಪ ಅವರ ಮೇಲೆ ಹೊರಿಸಲಾಗಿದೆ. ಯಾವುದೇ ದಾಖಲೆಯಿಲ್ಲದೇ ಸರ್ಕಾರಕ್ಕೆ ತೆರಿಗೆ ಕಟ್ಟದೇ ಇದನ್ನು ಕಾನೂನುಬಾಹಿರವಾಗಿ ರಪ್ತು ಮಾಡಲಾಗಿದೆಯೆಂದು ಆರೋಪಿಸಲಾಗಿದೆ. ಸತೀಷ್ ಸೈಲ್ ಕಂಪನಿ ಮೂಲಕ ಅನಿಲ್ ಲಾಡ್ ಅಕ್ರಮವಾಗಿ ಅದಿರು ರಫ್ತು ಮಾಡಿದ್ದರು.
ಸತೀಶ್ ಸೈಲ್ ಅವರನ್ನು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಹಿಂದೆ ಬಂಧಿಸಿದ್ದ ಸಿಬಿಐ ಅಧಿಕಾರಿಗಳು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ಲಾಡ್ ಬಂಧನದಿಂದ ಅವರ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ. ಅನಿಲ್ ಲಾಡ್ ಅವರನ್ನು ಸಿಬಿಐ ವಿಶೇಷ ಕೋರ್ಟ್ಗೆ ನಾಳೆ ಹಾಜರುಪಡಿಸಲಾಗುತ್ತದೆ. ಅದಾದ ಬಳಿಕ ಅವರ ವಿಚಾರಣೆ ಕೂಡ ನಡೆಯಲಿದೆ.