ಬೇಲೂರು, ಜು.12: ಮನುಷ್ಯರಲ್ಲಿ ಸ್ನೇಹ-ಪ್ರೀತಿ ಇರುವಂತೆಯೇ ಪ್ರಾಣಿಗಳಲ್ಲೂ ಅಪಾರ ಪ್ರೀತಿ ಗೌರವವಿದೆ ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ. ನಾಯಿಯೊಂದು ತನ್ನ ಸ್ನೇಹಿತನ ಶವದ ಮುಂದೆ ಗಂಟೆಗಟ್ಟಲೇ ಕುಳಿತು ಸಾವಿಗೆ ಕಣ್ಣೀರು ಮಿಡಿಯಿತು.
ಪಟ್ಟಣದ ಡಾ.ಅಂಬೇಡ್ಕರ್ ನಗರದಿಂದ ಜೆಪಿ ನಗರಕ್ಕೆ ಹೋಗುವಾಗ ಸಿಗುವ ಸಂತೆ ಮೈದಾನ ಸಮೀಪ, ಯಾವುದೋ ಅಪರಿಚಿತ ವಾಹನವೊಂದು ಮುಂಜಾನೆ ನಾಯಿಗೆ ಡಿಕ್ಕಿ ಹೊಡೆದಿದೆ. ನಾಯಿ ರಸ್ತೆ ಮಧ್ಯೆಯಲ್ಲೆ ಮೃತ ಪಟ್ಟಿದ್ದು, ಅತಿ ವೇಗದಿಂದ ಬರುವ ವಾಹನಗಳು ಸತ್ತ ನಾಯಿಯ ಮೇಲೆಯೇ ಚಲಿಸಿವೆ. ನಿಯತ್ತಿಗೆ ಹೆಸರಾಗಿರುವ ನಾಯಿ ಸ್ನೇಹಕ್ಕೂ ಎತ್ತಿದ ಕೈ ಎಂಬುದನ್ನು ಸಾಬೀತುಪಡಿಸಿದೆ.
ರಸ್ತೆ ಮಧ್ಯೆ ನಾಯಿ ದೇಹ ಬಿದ್ದಿದ್ದರೆ ಮತ್ತೊಂದು ನಾಯಿ ಗಂಟೆಗಟ್ಟಲೆ ರೋದಿಸುತ್ತಾ ಕುಳಿತಿತ್ತು. ಆದರೆ ಈ ಶ್ವಾನದ ನೋವು ನಾಗರಿಕರಿಗೆ ಅರಿವೇ ಆಗದೆ ಹೋದದ್ದು ನಿಜಕ್ಕೂ ವಿಪರ್ಯಾಸ. ಬಹಳ ಸಮಯದ ನಂತರ ಪುರಸಭೆಯ ಕೆಲ ಸಿಬ್ಬಂದಿ ನಾಯಿಯ ಶವವನ್ನು ಟ್ರಾಕ್ಟರ್ ನಲ್ಲಿ ತೆಗೆದುಕೊಂಡು ಹೋದರು. ಆದರೂ ಕೆಲ ಕಾಲ ನಾಯಿ ಅಲ್ಲೇ ನಿಂತು ಕಣ್ಣೀರು ಹಾಕಿ ಅಲ್ಲಿಂದ ತೆರಳಿತು.