ಹೊಸದಿಲ್ಲಿ/ಬೆಂಗಳೂರು: ‘ಸಿಲ್ಲಿ ವಿಷಯಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಬೇಕಿಲ್ಲ’- ವ್ಯಾಪಂ ಹಗರಣ ಸಂಬಂಧ ಕೇಂದ್ರ ಕಾನೂನು ಸಚಿವ ಸದಾನಂದ ಗೌಡ ಅವರ ಈ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿದೆ.
ವ್ಯಾಪಂ ಹಗರಣ ಕುರಿತು ಪ್ರಧಾನಿ ನರೇಂದ್ರ ಸ್ಪಷ್ಟನೆ ನೀಡಬೇಕು ಎಂದು ಕಾಂಗ್ರೆಸ್ ಪಟ್ಟು ಹಿಡಿದಿರುವ ಬಗ್ಗೆ ಪ್ರತಿಕ್ರಿಯಿಸಿದ ಸದಾನಂದ ಗೌಡ, ‘ಸಿಲ್ಲಿ ವಿಷಯಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಉತ್ತರಿಸುವ ಅಗತ್ಯ ಇಲ್ಲ,’ ಎಂದಿದ್ದರು.
ಕಾನೂನು ಸಚಿವರ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್, ಇದು ಬಿಜೆಪಿಯ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದಿದೆ. ವ್ಯಾಪಂ ಕುರಿತ ಸದಾನಂದ ಗೌಡ ಅವರ ಹೇಳಿಕೆಯನ್ನು ಖಂಡಿಸಿ ಎನ್ಎಸ್ಯುಐ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದೆ.
ಮಧ್ಯಪ್ರದೇಶ ವೃತ್ತಿಪರ ಪರೀಕ್ಷಾ ಮಂಡಳಿ(ವ್ಯಾಪಂ) ಹಗರಣಕ್ಕೆ ಸಂಬಂಧಿಸಿದಂತೆ ಸಾವುಗಳ ಸರಣಿಗೆ ಮಂಗಳವಾರ ಮತ್ತೊಂದು ಸೇರ್ಪಡೆಯಾಗಿದ್ದು , ಇದುವರೆಗೆ ನಿಗೂಢವಾಗಿ ಸತ್ತವರ ಸಂಖ್ಯೆ 48ಕ್ಕೇರಿದೆ.