ಬೆಂಗಳೂರು: ಶ್ರೀಲಂಕಾದ ಬಟ್ಟೆ ತಯಾರಿಕಾ ಫ್ಯಾಕ್ಟರಿಯಲ್ಲಿ ನಡೆದ ಕೊಲೆ ವಿಡಿಯೋ ದೃಶ್ಯವನ್ನು ಫೇಸ್ಬುಕ್ಗೆ ಅಪ್ಲೋಡ್ ಮಾಡಿ ‘ನಗರದ ಗರುಡಾ ಮಾಲ್ನಲ್ಲಿ ನಡೆದಿದೆ’ ಎಂದು ಸುಳ್ಳು ಸ್ಟೇಟಸ್ ಹಾಕಿದ ತಪ್ಪಿಗೆ ಮೈಸೂರಿನ ಉದ್ಯಮಿ ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಎಣಿಸುವಂತಾಗಿದೆ.
ಪ್ರದೀಪ್ ಕುಲಕರ್ಣಿ (35) ಬಂಧಿತ ಉದ್ಯಮಿ. ಅಶೋಕನಗರದಲ್ಲಿನ ಗರುಡಾ ಮಾಲ್ ಆಡಳಿತ ಮಂಡಳಿ ನೀಡಿದ ಮಾನಹಾನಿ ದೂರಿನ ಮೇರೆಗೆ ಮೈಸೂರಿನಲ್ಲಿ ಆರೋಪಿಯನ್ನು ಬಂಧಿಸಿದ್ದು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜೂ.23ರಂದು ಶ್ರೀಲಂಕಾದ ಬಟ್ಟೆ ಮಳಿಗೆಯಲ್ಲಿ ಮಚ್ಚಿಂದ ಕೊಚ್ಚಿ ಪ್ರೇಯಸಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಯುವಕ ಬಳಿಕ ತಾನೂ ಚೂರಿ ಇರಿದುಕೊಂಡಿದ್ದ. ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ಈ ಭೀಕರ ದೃಶ್ಯವನ್ನು ಜೂ.29ರಂದು ಪ್ರದೀಪ್, ಫೇಸ್ಬುಕ್ ಖಾತೆಗೆ ಅಪ್ಲೋಡ್ ಮಾಡಿದ್ದ.
ಗರುಡಾ ಮಾಲ್ನ ಒಳಗೆ ಕೊಲೆ ನಡೆದಿದೆ ಎಂಬ ಸುಳ್ಳು ಸ್ಟೇಟಸ್ ಅನ್ನು 800ಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದರು. ಫೇಸ್ಬುಕ್ನಲ್ಲಿ ವಿಡಿಯೋ ವೀಕ್ಷಿಸಿದ ಜನ ಬೆಚ್ಚಿಬಿದ್ದಿದ್ದರು. ಪೊಲೀಸರು ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ.