ಬೆಂಗಳೂರು, ಜು. 5; ವಿವಾಹವಾಗಿದ್ದ ಪತಿಯನ್ನು ಬಿಟ್ಟು ಬೇರೊಬ್ಬನ ಜೊತೆ ಓಡಿ ಬಂದಿದ್ದ ತಂಗಿ ಹಾಗೂ ಆಕೆಯ ಜೊತೆಗಿದ್ದ ಯುವಕನನ್ನು ರೊಚ್ಚಿಗೆದ್ದ ಅಣ್ಣ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆಗೈದಿರುವ ದಾರುಣ ಘಟನೆ ಸೋಲದೇವನಹಳ್ಳಿಯ ವಿನಾಯಕನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಕೊಪ್ಪಳ ಜಿಲ್ಲೆಯ ಅಂಚಿನಾಳದ ಕಸ್ತೂರಿ (25) ಹಾಗೂ ಆಕೆಯ ಜೊತೆಗಿದ್ದ ಬಸವರಾಜ (28) ಕೊಲೆಯಾದವರು. ಇವರಿಬ್ಬರನ್ನು ಕೊಲೆಗೈದ ಅಣ್ಣ ಹನಮಂತರಾಯ ಪರಾರಿಯಾಗಿದ್ದಾನೆ. ಕಸ್ತೂರಿಯನ್ನು ಹುಬ್ಬಳ್ಳಿಯ ಕೇಶವಾಪುರದ ವ್ಯಕ್ತಿಯೊಬ್ಬರಿಗೆ ಕಳೆದ ಕೆಲ ತಿಂಗಳುಗಳ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ಕೆಲ ದಿನಗಳು ಮಾತ್ರ ಪತಿಯ ಜೊತೆಗಿದ್ದ ಕಸ್ತೂರಿ ಅಂಚಿನಾಳಕ್ಕೆ ಬಂದು .ಬಸವರಾಜ ಟೈಲರ್ ಕೆಲಸ ಮಾಡುತ್ತಿದ್ದ ಬಸವರಾಜನ ಜೊತೆಗೆ ಹೋಗಿದ್ದಳು.
ಕಸ್ತೂರಿ ಕಾಣೆಯಾಗಿರುವ ಸಂಬಂಧ ಕೇಶವಾಪುರ ಪೊಲೀಸ್ ಠಾಣೆ ಹಾಗೂ ಅಂಚಿನಾಳ ಗ್ರಾಮವು ಸೇರುವ ಕುಗ್ಗನೂರು ಠಾಣೆಯಲ್ಲೂ ದೂರು ದಾಖಲಾಗಿತ್ತು. ಎರಡು ತಿಂಗಳ ಹಿಂದಷ್ಟೇ ಪತ್ತೆಯಾದ ಕಸ್ತೂರಿಯನ್ನು ರಾಜಿ ಪಂಚಾಯ್ತಿ ಮಾಡಿ ಬುದ್ಧಿ ಹೇಳಿ ಕೇಶವಾಪುರದ ಗಂಡನ ಮನೆಗೆ ಕಳುಹಿಸಲಾಗಿತ್ತು.
ಕೆಲದಿನಗಳನ್ನು ಕಳೆದ ಆಕೆ ಮತ್ತೆ ಬಸವರಾಜನ ಸಂಪರ್ಕಕ್ಕೆ ಬಂದಿದ್ದು, ಅಲ್ಲಿಂದ ಇಬ್ಬರು ಸೋಲದೇವನಹಳ್ಳಿಗೆ ಬಂದು ವಿನಾಯಕನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದರು. ತಂಗಿಯ ವರ್ತನೆಯಿಂದ ಅಣ್ಣ ಹನುಮಂತರಾಯ ಆಕ್ರೋಶಗೊಂಡು ದ್ವೇಷದಿಂದ ಕುದಿಯುತ್ತಿದ್ದ.
ಅದ್ಹೇಗೋ ಇವರಿಬ್ಬರೂ ಸೋಲದೇವನಹಳ್ಳಿಯ ವಿನಾಯಕನಗರದಲ್ಲಿರುವುದನ್ನು ತಿಳಿದುಕೊಂಡ ಹನುಮಂತರಾಯ, ನಿನ್ನೆ ತಂಗಿಯ ಮನೆಗೆ ಬಂದಿದ್ದಾನೆ. ಇಬ್ಬರನ್ನು ಚೆನ್ನಾಗಿ ಮಾತನಾಡಿಸಿಕೊಂಡು ರಾತ್ರಿ ಜೊತೆಯಲ್ಲಿ ಊಟ ಮುಗಿಸಿ ಮಧ್ಯರಾತ್ರಿ ಮಲಗಿದ್ದ ಇಬ್ಬರನ್ನು ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಸ್ಥಳಕ್ಕೆ ಡಿಸಿಪಿ ಸುರೇಶ್ ಅವರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಸೋಲದೇವನಹಳ್ಳಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.