ಬೆಳಗಾವಿ: ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಆಗಾಗ ಕ್ಯಾತೆ ತೆಗೆಯುತ್ತಿರುವ ಎಂ.ಇ.ಎಸ್. ಪುಂಡರು ಸಾಮಾಜಿಕ ಜಾಲ ತಾಣಗಳಲ್ಲಿ ತಮ್ಮ ಪುಂಡಾಟಿಕೆ ಮೆರೆದಿದ್ದಾರೆ.
ಬೆಳಗಾವಿಯಲ್ಲಿರುವ ಸುವರ್ಣ ಸೌಧದ ಚಿತ್ರವನ್ನು ಎಡಿಟ್ ಮಾಡಿ ಅದರ ಮೇಲೆ ಎಂಇಎಸ್ ಧ್ವಜವನ್ನು ಹಾರಿಸಿದ್ದಾರಲ್ಲದೇ ‘ಬೆಳಗಾಂವ್’ ಎಂದು ಮರಾಠಿಯಲ್ಲಿ ಬರೆದಿದ್ದಾರೆ. ಇದನ್ನು ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್ ಹಾಗೂ ವಾಟ್ಸಾಪ್ ಗಳಲ್ಲಿ ಹಾಕುವ ಮೂಲಕ ಕನ್ನಡಿಗರ ಆಕ್ರೋಶಕ್ಕೆ ಮತ್ತಷ್ಟು ತುಪ್ಪ ಸುರಿದಿದ್ದಾರೆ.
ಅಲ್ಲದೇ ಖಾನಾಪುರದ ಎಂ.ಇ.ಎಸ್. ಶಾಸಕ ಅರವಿಂದ್ ಪಾಟೀಲ್, ತಮ್ಮ ಶಾಸಕ ಸ್ಥಾನ ಹೋದರೂ ಸರಿ ಬೆಳಗಾವಿಯನ್ನು ಮಹಾರಾಷ್ಟ್ರದೊಂದಿಗೆ ಸೇರಿಸುವ ಹೋರಾಟವನ್ನು ಕೈ ಬಿಡುವುದಿಲ್ಲವೆಂದು ಘೋಷಿಸಿದ್ದಾರೆ. ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವ ವೇಳೆಯೇ ಕನ್ನಡಿಗರನ್ನು ಕೆಣಕುವ ಕಾರ್ಯವನ್ನು ಎಂ.ಇ.ಎಸ್. ಮಾಡುತ್ತಿರುವುದಕ್ಕೆ ಈಗ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.