ಮೈಸೂರು, ಜು.1- ರಾಮದಾಸ್ ಅವರು ನನ್ನನ್ನು ಪತ್ನಿ ಎಂದು ಒಪ್ಪಿಕೊಂಡು ನನ್ನ ಜತೆ ಜೀವನ ನಡೆಸಬೇಕು. ಆದರೆ, ಹೆಜ್ಜೆ ಹೆಜ್ಜೆಗೂ ನನಗೆ ಅನ್ಯಾಯ ಮಾಡುತ್ತಿದ್ದಾರೆ. ಇದೇ ಧೋರಣೆ ಮುಂದುವರಿಸಿದರೆ ಹೋರಾಟ ನಡೆಸುವುದಾಗಿ ಪ್ರೇಮಕುಮಾರಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ನನ್ನ ಮತ್ತು ರಾಮದಾಸ್ ಪ್ರಕರದಲ್ಲಿ ಸಿಐಡಿ ತನಿಖೆಯಿಂದ ನನಗೆ ನ್ಯಾಯ ದೊರಕಿಲ್ಲ. ಹೀಗಾಗಿ ಮತ್ತೆ ನ್ಯಾಯಾಲಯದ ಮೊರೆ ಹೋಗುತ್ತಿದ್ದೇನೆ. ಸರಿಯಾದ ರೀತಿಯಲ್ಲಿ ತನಿಖೆ ನಡೆಸಿದ ಸಿಐಡಿ ಅಂತಿಮ ಹಂತದಲ್ಲಿ ನನ್ನ ವಿರುದ್ಧ ನ್ಯಾಯ ನೀಡಿದೆ ಎಂದು ಆರೋಪಿಸಿದರು. ರಾಮದಾಸ್ ತಪ್ಪು ಮಾಡದೆ ಇದ್ದಿದ್ದರೆ ನನಗೆ ಆಮಿಷ ಏಕೆ ಒಡ್ಡಬೇಕಿತ್ತು. ಅವರ ಸಹೋದರ ರಾಜರಾಜೇಶ್ವರಿ ನಗರದಲ್ಲಿ ಒಂದು ನಿವೇಶನ ಕೊಡಿಸಿದ್ದು, ಅದನ್ನು ನನ್ನ ತಮ್ಮನ ಹೆಸರಿನಲ್ಲಿ ಮಾಡಿಸಿದ್ದೇನೆ. ಇದರೊಂದಿಗೆ ಕಾರನ್ನೂ ಕೊಡಿಸಿದ್ದಾರೆ. ರಾಮದಾಸ್ ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿದರು.
ನನ್ನ ರಾಜೀನಾಮೆಯನ್ನು ಸರ್ಕಾರ ಪರಿಗಣಿಸಿರಲಿಲ್ಲ. ಆದರೆ, ನಿನ್ನೆ ರಾಜೀನಾಮೆ ಸ್ವೀಕಾರವಾಗಿದೆ. ಹಾಗಾಗಿ ಇದೀಗ ನಾನು ಮುಕ್ತವಾಗಿ ಮಾತನಾಡಲು ಸಾಧ್ಯವಾಗಿದೆ. ಸಿಐಡಿ ಇದು ಮುಗಿದ ಪ್ರಕರಣ ಎಂದು ಹೇಳಿದೆ. ಆದರೆ, ನನಗೆ ಇದರಿಂದ ನ್ಯಾಯ ದೊರೆತಿಲ್ಲ. ಹಾಗಾಗಿ ನ್ಯಾಯಾಲಯದ ಮೊರೆ ಹೋಗುತ್ತಿದ್ದೇನೆ ಎಂದು ತಿಳಿಸಿದರು.